Monday, 21 January 2013

ಪುಟ್ಟ ಹುಡುಗನ ಕನಸು ನನಸಾಯ್ತು.....


ಜೀವನದಲ್ಲಿ ಕೆಲವೊಮ್ಮೆ ಎಲ್ಲೋ ಹುಟ್ಟಿ , ಎಲ್ಲೋ ಬೆಳೆದ ಕೆಲವು ವ್ಯಕ್ತಿಗಳನ್ನು ಭೇಟಿ ಆಗ್ತೇವೆ. ಆ ಸಂಬಂಧಗಳು ಎಷ್ಟು ಗಟ್ಟಿಯಾಗಿ ನಮ್ಮನ್ನು ಕೆಲವೊಮ್ಮೆ ಆವರಿಸುತ್ತೆ ಅಂದರೆ ಅದನ್ನು ಊಹಿಸಲಿಕ್ಕೆ ಸಾಧ್ಯ ಆಗದಷ್ಟು. ಬಹುಷಃ ನಾವು ಅದನ್ನು ಕನಸಿನಲ್ಲೂ ಕಲ್ಪಿಸಿಕೊಂಡಿರೋದಿಲ್ಲ ಅಷ್ಟು ಗಾಢವಾಗಿ ಆ ಸಂಬಂಧಗಳು ನಮ್ಮ ಜತೆಯಾಗುತ್ತೆ.

ನನ್ನ ಜೀವನದಲ್ಲಿ ಹೇಳ್ಬೇಕಂದ್ರೆ ಅಂಥಹ ಒಬ್ಬ ವ್ಯಕ್ತಿಗೆ ನಾನು ಪರಿಚಿತಳಾಗ್ತೇನೆ ಅಂಥ ಕನಸಲ್ಲೂ ಅಂದುಕೊಂಡಿರಲಿಲ್ಲ. ಪ್ರೀತಿಯ ಸಹೋದರನ ಸ್ಥಾನದಲ್ಲಿ ಒಬ್ಬ ಹುಡುಗ ನನ್ನ ಬಾಳಿಗೆ ಪ್ರವೇಶ ಪಡೆದದ್ದು ನನಗೆ ತುಂಬಾ ಸಂತೋಷದ ವಿಚಾರ. ಯಾಕಂದ್ರೆ ಇದುವರೆಗೂ ಅಂತಹ ಸಂಬಂಧ ಅನುಭವಿಸಿರದ ನನಗೆ  ಏನೋ ಬೆಲೆಕಟ್ಟಲಾರದ ವಸ್ತುವೊಂದು ಸಿಕ್ಕ ಅನುಭವ. ಆ ಸಹೋದರನ ಹೆಸರು  "ನಟರಾಜು"... ಬಹಳಷ್ಟು ಜನರಿಗೆ ಪರಿಚಿತ ಮುಖ. 

ಮೊದಲೆಲ್ಲಾ ಅವನು ಫೋನ್ನಲ್ಲಿ ಮಾತಾಡೋವಾಗ "ನಾನು ಹೀಗೊಂದು ಅಂತರ್ಜಾಲ ಪತ್ರಿಕೆ ಮಾಡ್ಬೇಕು ಅಂದುಕೊಂಡಿದ್ದೀನಿ ..." ಅಂದಾಗ, ನಾನು "ಮಾಡೋಕ್ಕೆ ಬೇರೆ ಕೆಲಸ ಇಲ್ಲ ..." ಅಂತ  ಅದೆಷ್ಟೋ ಸಾರಿ ಅಂದಿದ್ದೆ. ಅದಕ್ಕೆ ಅವನು ಸೀರಿಯಸ್ಸಾಗಿ ..." ಅದು ನನ್ನ ಎಷ್ಟೋ ವರ್ಷಗಳ ಆಸೆ, ಕನಸು...." ಅಂದರೂ ನನಗೆ ನಂಬಿಕೆ ಬರ್ತಾ ಇರಲಿಲ್ಲ. ಎಲ್ಲೋ ಸುಮ್ಮನೆ ತಮಾಷೆ ಮಾಡ್ತಾ ಇದ್ದಾನೆ ಅಂದುಕೋತಾ ಇದ್ದೆ.  ಆದರೆ ಇತ್ತೀಚೆಗೆ ಪ್ರತಿಬಾರಿ ಫೋನ್ ಮಾಡಿ ದಾಗ್ಲೂ 'ಪಂಜು' ಬಗ್ಗೆ ಏನೆಲ್ಲಾ ಕೆಲಸಗಳು ನಡೀತಾ ಇದೆ ಅಂತಾ ವಿವರಿಸುವಾಗ  ಇವನು ನಿಜಕ್ಕೂ ಇಂಥಹ ಒಂದು ಸಾಹಸ ಶುರು ಮಾಡ್ತಾ ಇದ್ದಾನೆ ಅನ್ನೋ ನಂಬಿಕೆ ಬಂತು. 

ಇ-ಪತ್ರಿಕೆ ಅಂದರೆ ಅದು ಹೇಗಿರುತ್ತೆ . ಅದಕ್ಕೆ ಯಾರಾದ್ರು  ಡಿಸೈನರನ್ನು ಹುಡುಕ್ಬೇಕು , ಅದಕ್ಕೆ ಎಷ್ಟೆಲ್ಲಾ ಹಣ ಖರ್ಚಾಗುತ್ತೆ....ಇನ್ನು ಏನೆಲ್ಲಾ ಇದ್ರೆ ಚೆನ್ನಾಗಿರುತ್ತೆ , ಅದೂ-ಇದೂ ಅಂತ ಅವನು ಆಸಕ್ತಿಯಿಂದ ಹೇಳೋವಾಗ, ಕೇಳೋದಷ್ಟೇ ನನ್ನ ಕೆಲಸ. ಯಾಕಂದ್ರೆ ಆ ವೆಬ್ ಪೇಜ್, ಅದರ ಡಿಸೈನ್ ಇದೆಲ್ಲದರ ಗಂಧ-ಗಾಳಿಯು ನನಗೆ ಗೊತ್ತಿರಲಿಲ್ಲ. ಅವನು ಹೇಳೋದು ಕೇಳಿ ಕೇಳಿ, ನನಗೂ ಸ್ವಲ್ಪ ಅದರ ಬಗ್ಗೆ ಜ್ನ್ಯಾನ ಸಿಕ್ತು. ಓ... ಇದು ನಾನು ಅಂದುಕೊಂಡಷ್ಟು ಸುಲಭ ಇಲ್ಲ ಅಂತ ಆಗಲೇ ನನಗೆ ಗೊತ್ತಾಗಿದ್ದು. ಜೊತೆಗೆ ಟೆನ್ಶನ್ ಸಹಾ. ಶುರು ಮಾಡೋ ಪತ್ರಿಕೆ ಚೆನ್ನಾಗಿ ಮೂಡಿ ಬರಲಿ ಅಂತ.

ಇವತ್ತು ಬೆಳಿಗ್ಗೆ ಬೆಳಿಗ್ಗೆ ಫೇಸ್ಬುಕ್ ಆನ್ ಮಾಡಿದ್ರೆ, ಪಂಜು ಪತ್ರಿಕೆ ಅದಾಗಲೇ ಬಿಡುಗಡೆ ಆಗಿ ಬಿಟ್ಟಿತ್ತು. ಬೆಳಿಗ್ಗೆಯೇ ನಾನೆಣಿಸದ "ಸ್ವೀಟ್ ಸರ್ಪ್ರೈಸ್ ". 

  • http://www.panjumagazine.com/

ಸ್ನೇಹಿತರೇ ಈ ವಾರ ಪತ್ರಿಕೆಯ ವಿಳಾಸ ಹೀಗಿದೆ. http://www.panjumagazine.com/ ಸಮಯವಿದ್ದಾಗ ಭೇಟಿ ಕೊಡಿ. ಹೊಸ ಹೊಸ ಬರಹಗಳನ್ನು ಆಸ್ವಾದಿಸಿ. .... :))



"ಜೇಬಿನಲ್ಲಿ ದುಡ್ಡಿಲ್ಲದಿದ್ದರೂ ಕಣ್ಣೊಳಗೆ ಕನಸುಗಳಿರಬೇಕು ಎಂದು ಬಲವಾಗಿ ನಂಬಿರುವವನು ನಾನು. ಆ ನಂಬಿಕೆಯ ಫಲವೇ ಈ "ಪಂಜು" ಅಂತರ್ಜಾಲ ತಾಣ." 


ಈ ಮೇಲಿನ ಸಾಲುಗಳು ಅವನು ತನ್ನ 'ಪಂಜು' ಪತ್ರಿಕೆಯ ಸಂಪಾದಕೀಯದಲ್ಲಿ ಬರೆದಿರೋದು. ಈ ಸಾಲುಗಳ ಅರ್ಥ, ಅವನನ್ನು ಹತ್ತಿರದಿಂದ ಬಲ್ಲವರು, ಅವನನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡವರಿಗಷ್ಟೇ ಗೊತ್ತಾಗೋದು..... :))




ನಟರಾಜು  

ನನಗಂತು ಇವತ್ತು ನಮ್ಮ ಮನೆಯ ಮಗ ಒಳ್ಳೆಯ ಸಾಧನೆ ಮಾಡಿದ ಸಂತೋಷ, ತೃಪ್ತಿ  . ಇವತ್ತು ಅವನ ಆಸೆ, ಕನಸುಗಳು ಕೈಗೂಡಿದ ದಿನ. ಮುಂದಿನ ಜೀವನವು ಹೀಗೆ ಅಂದುಕೊಂಡಿದ್ದೆಲ್ಲಾ  ಸಾಂಗವಾಗಿ ನಡೆದು, ನಗುನಗ್ತಾ ನೆಮ್ಮದಿಯಿಂದ ಸಾಗಲಿ ಎನ್ನುವ ಪ್ರೀತಿಯ ಹಾರೈಕೆ .

ಪ್ರೀತಿಯಿಂದ 

ಸುದೀಪ.....


Monday, 14 January 2013

ಒಬಾಮ.....!!!!!



ನನ್ನ ಅಮ್ಮನ ಮನೆ ಇರೋದು ಉಡುಪಿ ಹತ್ತಿರ ಇರೋ ಕಡಿಯಾಳಿ ಏರಿಯಾದಲ್ಲಿ. ಅವರ ಕ್ರಾಸ್ನಲ್ಲಿ ಸುಮಾರು 10-12 ಮನೆ ಇದೆ. ಆ ಬೀದಿಗೆಲ್ಲ ಒಬ್ಬ ಮುದ್ದು ರಾಜಕುಮಾರ ಇದ್ದಾನೆ. ಅವನೇ 'ಒಬಾಮ'. ಎಲ್ಲರ ಪ್ರೀತಿಯ ಡುಮ್ಮ ನಾಯಿ. ಎಲ್ಲರ ಮನೆಯಲ್ಲೂ ಸ್ವಲ್ಪ ಸ್ವಲ್ಪ ತಿಂಡಿ, ಊಟ ಮಾಡಿ ಜೀವನ ಸಾಗಿಸ್ತಾ ಇರೋ ನಿರುಪದ್ರವ ಪ್ರಾಣಿ   . ಇವನೆಂದರೆ ಎಲ್ರಿಗೂ ವಿಪರೀತ ಪ್ರೀತಿ. ಆ ಬೀದಿಯ ಮಕ್ಕಳೆಲ್ಲ ಸೇರಿ ಅವನಿಗೆ 'ಒಬಾಮ' ಅಂತ ಹೆಸರಿಟ್ಟಿದ್ದಾರೆ. ಆದರೆ ನನ್ನ ತಂದೆ ಮಾತ್ರ ಅವನನ್ನು 'ಟೈಗರ್' ಅಂತ ಕರೀತಿದ್ದರು. ನೋಡೋಕ್ಕೆ ದೈತ್ಯ ಆಕಾರ. ಯಾರಾದ್ರೂ ಹೊಸಬರು ನೋಡಿದ್ರೆ ಹೆದರಿಕೊಳ್ಬೇಕು ಹಂಗಿದೆ ಅವನ ಜೀವ. ಸುಮಾರು ಎರಡು ವರ್ಷ ಆಗಿದೆ ಅವನು ಆ ಏರಿಯಾಗೆ ಬಂದು. ಬಂದ ದಿನದಿಂದ ಎಲ್ಲರ ಪ್ರೀತಿ ಸಂಪಾದಿಸಿದ್ದಾನೆ.

ದಿನಾ ನನ್ನ ಅಮ್ಮ ಬೆಳಿಗ್ಗೆ ಗೇಟಿಗೆ ಹಾಕಿದ್ದ  ಹಾಲಿನ ಚೀಲದಿಂದ ಹಾಲಿನ  ಪ್ಯಾಕೆಟ್  ತೆಗೆಯುವಾಗ, ಬಾಗಿಲಿನ  ಶಬ್ದಕ್ಕೆ ಒಬಾಮ ಹಾಜರ್. ಮುಂದಿನ ಎರಡು  ಕಾಲುಗಳನ್ನು ಉದ್ದಕ್ಕೆ ಚಾಚಿ ನಮಸ್ಕಾರ ಅನ್ನೋ ಹಾಗೆ ಫೋಸ್ ಕೊಡ್ತಾನೆ.  ನಂತರ ಅಮ್ಮ ಅವನಿಗೆ ಒಳಗೆ ಹೋಗಿ ಏನಾದರೂ ತಿಂಡಿ ಕೊಟ್ಟ ಮೇಲೆ ಅಸಾಮಿ ನಾಪತ್ತೆ.... :))


ಅವನಿಗೆ ಎರಡು ವಿಷಯಗಳೆಂದರೆ ಇಷ್ಟ ಆಗಲ್ಲ. ಒಂದು ಮಳೆ, ಇನ್ನೊಂದು  ಪಟಾಕಿ. ಮಳೆಗಾಲದಲ್ಲಿ ಎಷ್ಟೇ ಹಸಿವಾದರೂ ಯಾರು ಕರೆದ್ರೂ ಹೋಗಲ್ಲ.  ಮೈ ಒದ್ದೆ ಮಾಡಿಕೊಳ್ಳಲ್ಲ. ತುಂಬಾ ಜಾಣ. ಮಳೆ ನಿಂತ ಮೇಲೆ ಹೋಗಿ ತಿಂದು ಮಲಗ್ತಾನೆ. ಇನ್ನು ದೀಪಾವಳಿ  ಸಮಯದಲ್ಲಿ ಸಂಜೆ ಮಕ್ಕಳು ಪಟಾಕಿ ಹಚ್ಚಲಿಕ್ಕೆ ಶುರು ಮಾಡಿದ್ರೆ  'ಒಬಾಮನ' ಪತ್ತೆಯೇ ಇರೋದಿಲ್ಲ. ಹೆದರಿಕೆಗೆ ಎಲ್ಲಿ ಅಡಗಿ ಕೂತ್ಕೊತಾನೋ ಗೊತ್ತಿಲ್ಲ.. ದೀಪಾವಳಿ ಹಬ್ಬ ಮುಗಿಯುವವರೆಗೂ ಅವನಿಗೆ ಇದೊಂದು ದೊಡ್ಡ ಶಿಕ್ಷೆ.

ಆ ಬೀದಿಯಲ್ಲಿ ಒಟ್ಟು 3 ಮನೆಗಳಲ್ಲಿ ನಾಯಿಗಳಿವೆ. ಅವುಗಳ ಹೆಸರು ಮಜವಾಗಿದೆ. ಒಂದು 'ಶಾಂಡು',   ಒಳ್ಳೆ ಜಾತಿಯ ದೊಡ್ಡ ನಾಯಿ. ಎರಡನೆಯದು 'ಡ್ಯಾನಿ' ಸಣ್ಣ ಕಾಲಿನ ಪುಟ್ಟ ನಾಯಿ. ಆದರೆ ಅದರ ಕಂಠ ಮಾತ್ರ ಅಸಾಧ್ಯ. ಕಿವಿ ನೋಯೋ ಹಾಗೆ ಬೊಗಳುತ್ತೆ. ಮೂರನೆಯದು 'ಬ್ಲಾಕಿ' ಪಾಪದ ಹೆಣ್ಣು ನಾಯಿ. ಇದರಲ್ಲಿ 'ಶಾಂಡು' ಮತ್ತು 'ಡ್ಯಾನಿ' ಬದ್ಧ ವೈರಿಗಳು. ಇಬ್ಬರೂ ಅಕ್ಕಪಕ್ಕದ ಮನೆಯಲ್ಲಿ ಇರೋದು. ಎಲ್ಲಾದರೂ ಅವರ ಮಾಲೀಕರು ಒಂದೇ  ಸಮಯಕ್ಕೆ ಅವುಗಳನ್ನು 'ವಾಕಿಂಗ್' ಕರೆದುಕೊಂಡು ಹೋಗುವಾಗ, ಅಕಸ್ಮಾತ್ ಎದುರು ಬದುರು ಸಿಕ್ಕಿದ್ರೆ, ಅಷ್ಟೇ ಕಥೆ...ಇಡೀ  ಬೀದಿ ತುಂಬಾ ಇವುಗಳ ಜಗಳ. ಮಾಲಿಕರು ಬೆಲ್ಟ್ ಹಿಡಿದುಕೊಂಡಿದ್ದರು, ಒಬ್ಬರ ಮೇಲೊಬ್ಬರು ಹಾರಾಡಿ, ಮಾಲಿಕರನ್ನು ಜೊತೆಗೆ  ಎಳೆದಾಡಿ  ಜಗಳಕ್ಕೆ ನಿಲ್ಲುತ್ವೆ. ಅವರ ಮಾಲಿಕರಿಗಂತು ಸುಸ್ತು ಹೊಡೆಸಿ ಬಿಡುತ್ವೆ. ಅವರಿಗೆ ಅವುಗಳನ್ನು ಎಳೆದುಕೊಂಡು ಹೋಗಿ ಮನೆಯ ಗೇಟ್ ಒಳಗೆ ಸೇರಿಸೋದ್ರಲ್ಲಿ ಸಾಕಾಗಿಬಿಡುತ್ತೆ. :-)

ಆದರೆ ನಮ್ಮ 'ಒಬಾಮ' ಎಲ್ಲರ ಫ್ರೆಂಡ್. 'ಶಾಂಡು' ವಾಕಿಂಗ್ ಹೋಗೋವಾಗ, ಅವ್ನ ಜೊತೆ ಇವನು ಹೋಗ್ತಾನೆ. ಸ್ವಲ್ಪ ಹೊತ್ತು ತಿರುಗಾಡಿ ಬಂದ ನಂತರ 'ಶಾಂಡು' ಮಾಲೀಕರು ರಸ್ತೆಯ ಧೂಳು ಮನೆ ಒಳಗೆ ಬರದಂತೆ ಅವನ ಕಾಲುಗಳನ್ನು ನಲ್ಲಿ ನೀರಿನಿಂದ ತೊಳೆದು ಬಟ್ಟೆಯಿಂದ ಒರೆಸಿ, ಅವನ ಮೊದಲ ಮಹಡಿಯಲ್ಲಿರುವ ಮನೆಗೆ ಕರೆದುಕೊಂಡು ಹೋದ್ರೆ, 'ಒಬಾಮ' ಗೇಟ್ನ ಹೊರಭಾಗದಲ್ಲಿ ರೆಸ್ಟ್ ತೆಗೊಳ್ತಾನೆ.

ಇತ್ತೀಚೆಗಂತೂ 'ಒಬಾಮನಿಗೆ' ವಿಪರೀತ ಆಲಸ್ಯ. ಎಲ್ಲರ ಮನೆಯ ಬಿಸ್ಕಿಟ್, ರಸ್ಕ್, ದೋಸೆ, ಬೋಂಡಾ, ಹೋಳಿಗೆ, ಅನ್ನ-ಸಾರು, ಸಾಂಬಾರ್ ಏನೆಲ್ಲಾ ಸಿಗುತ್ತೋ ಎಲ್ಲಾ ತಿಂದು, ಎದುರು ಮನೆ ಅಂಕಲ್ ಇಡುವ ನೀರು ಕುಡಿದು  ವಿಪರೀತ ಮೈ ಬೆಳೆಸಿಕೊಂಡಿದ್ದಾನೆ.  ಅವನಿಗೆ ಈಗ ಒಂದು ನಿಮಿಷ ನಿಲ್ಲಲಿಕ್ಕೆ ಕೂಡೋದಿಲ್ಲ. ಎಲ್ಲಿ ಸಿಗುತ್ತೋ ಅಲ್ಲಿ ಮಲಗೋದೆ ಜಾಸ್ತಿ ಆಗಿದೆ. ವ್ಯಾಯಾಮಾನೇ ಇಲ್ಲ ಅವನ ದೇಹಕ್ಕೆ. ಇನ್ನು ಗಮ್ಮತ್ತೆಂದರೆ ಇವನನ್ನು ಯಾರೂ ಕರೀಬೇಕಂತ  ಇಲ್ಲ. ಸುಮ್ನೆ ಅವರ ಗೇಟಿಗೆ ಸ್ವಲ್ಪ ಶಬ್ದ ಮಾಡಿದ್ರೆ ಸಾಕು. ಕಿವಿ ಚುರುಕಾಗಿ, ಅದು ಅವನಿಗೆ ತಿನ್ನಲಿಕ್ಕೆ ಕರಿಯೋ ಸಿಗ್ನಲ್ ಅಂತ ಅವನಿಗೆ ಗೊತ್ತು. ಸೀದಾ ಓಡಿ  ಹೋಗಿ ಕೊಟ್ಟಿದ್ದನ್ನು ತಿಂದು ಆರಾಮಾಗಿರ್ತಾನೆ. :-)



ಇವನಿಗೆ ಒಬ್ಬ ಎದುರು ಮನೆ ಆಂಟಿ 'ಶೇಕ್ ಹ್ಯಾಂಡ್' ಮಾಡೋಕ್ಕೆ ಕಲ್ಸಿದ್ದಾರೆ. ಅವರ ಮನೆಗೆ ಹೋಗಿ ಕೆಲವೊಮ್ಮೆ ಅವರ ಮಗನ ಜೊತೆ ಆಟ ಆಡ್ತಾನೆ. ಇನ್ನೊಬ್ಬ ಆಂಟಿ ಮತ್ತು ಇವನ ಪ್ರೀತಿ ಇನ್ನು ಗಮ್ಮತ್ತಾಗಿರುತ್ತೆ. ಅವರು ಇವನ ಜೊತೆ ಮಾತಾಡ್ತಾರೆ. ಹೇಗಂದ್ರೆ,..."ಒಬಾಮ, ನಗೋ ..ಪ್ಲೀಸ್ ...ಕಣೋ..." ಅಂತ. ಇವನು ಅದೇನು ನಗ್ತಾನೋ , ಅವರಿಗೆ ಅದೇನು ಅರ್ಥ ಆಗುತ್ತೋ ಗೊತ್ತಿಲ್ಲ.  :-)

ಆ ಬೀದಿಗೆ ಒಬ್ಬ ಭಿಕ್ಷುಕರು, ಒಬ್ಬ ಸೇಲ್ಸ್ ಮ್ಯಾನ್ ಬರಲಿಕ್ಕೆ ಬಿಡೋದಿಲ್ಲ. ಅವನಿಗೆ ಮುನ್ಸಿಪಾಲ್ಟೀಯ ಕಸ ತೆಗೆದುಕೊಂಡು ಹೋಗುವ ವಾಹನ ಬಂದರೆ ಭಯಂಕರ ಸಿಟ್ಟು. ಅವರು ಹೋಗುವ ತನಕ ಬೊಗಳ್ತಾನೆ.

ನನ್ನ ಅಮ್ಮನ ಮನೆಗೆ ಯಾರೇ ಬಂದ್ರೂ ಅವರನ್ನು ಮೂಸಿ ನೋಡಿ 'ಫ್ರೆಂಡ್' ಮಾಡ್ಕೋತಾನೆ. ಅವರೇ ಇವನನ್ನು ನೋಡಿ ಹೆದರಬೇಕು.ಯಾವಾಗಲೂ ಅಮ್ಮನ ಮನೆಯ ಗೇಟ್ನ ಹೊರ ಭಾಗದ ಕಲ್ಲಿನ ಚಪ್ಪಡಿ ಯಲ್ಲಿ ಮಲಗಿ,ನಮ್ಮನ್ನು ಆಚೆ ಈಚೆ ಹೋಗದಂತೆ ಅಡ್ಡ ಮಾಡ್ತಾನೆ. ಅವನನ್ನು ಎಬ್ಬಿಸಲು ಸೋತು, ನಾವೇ ಅವನ ಮೇಲಿಂದ ಜಂಪ್ ಮಾಡ್ಬೇಕು ಅಥವಾ ಇನ್ನೊಂದು  ದೊಡ್ಡ  ಗೇಟ್ ನಿಂದ ಹೊರ ಹೋಗಬೇಕು. ಹಾಗೆಲ್ಲ ಕೆಲವೊಮ್ಮೆ ತೊಂದರೆ ಕೊಡ್ತಾನೆ ... :-)




ಆದರೂ ಎಲ್ಲರೂ ಅವನನ್ನು ತುಂಬಾ ಪ್ರೀತಿಸ್ತೀವಿ. ಅಮ್ಮನ ಮನೆಗೆ ಹೋದಾಗ ಅವನು ನೋಡಕ್ಕೆ ಸಿಗದಿದ್ರೆ ಬೇಜಾರಾಗುತ್ತೆ. ಎಲ್ಲಿ ಹೋಗಿದ್ದಾನೆ ಇವತ್ತು ಅನ್ನೋ ಚರ್ಚೆ ನಮ್ಮ ನಮ್ಮಲ್ಲೇ.....

ಹಿಂಗೆಲ್ಲಾ ಇದೆ ನಮ್ಮ 'ಒಬಾಮನ ಕಥೆ...' ಏನೇ ಆದ್ರೂ ಮನುಷ್ಯರಿಗಿಂತ ಪ್ರಾಣಿಗಳಿಗೆ ಪ್ರೀತಿ ಜಾಸ್ತಿ. ನಾವು ಒಂದು ಪಟ್ಟು ಪ್ರೀತಿ ತೋರ್ಸಿದ್ರೆ, ಅವು ನಮಗೆ ಹತ್ತು ಪಟ್ಟು ತಿರುಗಿ ಮುದ್ದು ಮಾಡ್ತಾವೆ... ಕೊನೆಯಲ್ಲಿ ಹೇಳೋದಿಷ್ಟೇ "ಲವ್ ...ಯು...ಒಬಾಮ...." :-)

ಇವತ್ತು ಬೇರೆ "ಸಂಕ್ರಾಂತಿ ಹಬ್ಬ". ನನ್ನ ಬ್ಲಾಗಿಗೆ ಭೇಟಿ ಕೊಟ್ಟ ಎಲ್ಲಾ ಸ್ನೇಹಿತರಿಗೂ ಹಬ್ಬದ ಹಬ್ಬದ ಶುಭಾಶಯಗಳು. "ಎಳ್ಳು-ಬೆಲ್ಲ ತಿಂದು ಒಳ್ಳೆ ಮಾತಾಡಿ". ಎಲ್ಲರೂ ಚೆನ್ನಾಗಿರಿ...

ಪ್ರೀತಿಯಿಂದ 

ಸುದೀಪ ...

Wednesday, 2 January 2013

ಎಸ್ ಎಂ ಎಸ್ ......


ಮೊನ್ನೆ 'ಡಿಸೆಂಬರ್ 25' ಕ್ರಿಸ್ಮಸ್ ದಿನ  ಎಲ್ಲಾ ಮೊಬೈಲ್ ಕಂಪನಿಗಳು 'ಫ್ರೀ ಮೆಸೇಜ್' ಬಂದ್ ಮಾಡಿತ್ತು. ಅಕಸ್ಮಾತ್ ಮೆಸೇಜ್ ಮಾಡಿದ್ರೆ  ಒಂದಕ್ಕೆ ಹತ್ತರಷ್ಟು ಚಾರ್ಜ್ ಮಾಡಿತ್ತು. ನಂತರ 'ಡಿಸೆಂಬರ್ ೩೧ ಮತ್ತು ಜನವರಿ ಒಂದು,' ಹೊಸ ವರ್ಷ ಅಂತ ಪುನಃ ಎಲ್ಲಾ ಫ್ರೀ ಮೆಸೇಜ್ ಬಂದ್...ಎಲ್ಲರೂ ಅದೆಷ್ಟು ಈ ಕಂಪನಿಗಳಿಗೆ ಬೈದುಕೊಂಡ್ರೋ ಗೊತ್ತಿಲ್ಲ. 

ಮೊನ್ನೆ ನಾವೆಲ್ಲಾ ಆತ್ಮೀಯ ಸ್ನೇಹಿತರು ಡಿಸೆಂಬರ್ 30 ಕ್ಕೆ ಮಾತಾಡಿಕೊಂಡಿದ್ವಿ . "ಹೇ ನಾಳೆಯಿಂದ ಇನ್ನು ಎರಡು ದಿನ 'ಎಸ್ ಎಂ ಎಸ್ ' ಇಲ್ಲ . ತುಂಬಾನೇ ಬೋರ್. ಏನಿದ್ರೂ ಇವತ್ತು ರಾತ್ರಿ 12 ಘಂಟೆ ಒಳಗೆ ಎಲ್ಲಾ ನಮ್ಮ ಪಟ್ಟಾಂಗ ಕ್ಲೋಸ್ ಅಂತ.". ರಾತ್ರಿ11 ರಿಂದ 12 ತನಕ ನಮ್ಮ ಮೆಸೇಜ್ ಚಾಲೂ. ಕೊನೆಯ ಮೆಸೇಜ್ ಹೀಗಿತ್ತು."ಬೈ. ಇನ್ನು ಮುಂದಿನ ವರ್ಷ ಸಿಗೋಣ, ಟೇಕ್ ಕೇರ್...ಗುಡ್ ನೈಟ್, ಹ್ಯಾಪಿ ನ್ಯೂ ಇಯರ್ ಇನ್ ಅಡ್ವಾನ್ಸ್  ".....

ಈ "ಎಸ್ ಎಂ ಎಸ್" ಅನ್ನೋದು ನಮ್ಮ ಜೀವನದಲ್ಲಿ ಅದೆಷ್ಟು ಪ್ರಾಮುಖ್ಯತೆ ಪಡ್ಕೊಂಡಿದೆ  ಅಂದ್ರೆ, ಮೊಬೈಲ್ನಲ್ಲಿ ಮೆಸ್ಸೇಜಿನ  'ಟುಯ್ ...ಟುಯ್ ...' ಶಬ್ದ ಇಲ್ಲದಿದ್ದರೆ ಮನೆ ಎಲ್ಲಾ ಖಾಲಿ ...ಖಾಲಿ.... ಆ ಶಬ್ದ ಒಂಥರಾ ಆನಂದ, ಖುಷಿ ಕೊಡುತ್ತೆ. ನಮ್ಮ ಜೊತೆ ಯಾರೋ ಒಬ್ಬ ಸ್ನೇಹಿತರು ಯಾವಾಗಲೂ ಇರ್ತಾರೆ ಅನ್ನೋ ಭಾವನೆ. ಈ ಹೊಸ ವರ್ಷದ ಗಲಾಟೇಲಿ ಈ ಎರಡು ದಿನಾ ಇದಕ್ಕೆಲ್ಲಾ ಪೂರ್ಣ ವಿರಾಮ.ದಿನಾ ಎಷ್ಟು ಮೆಸೇಜ್ ಮಾಡಿದ್ರು ಸುಸ್ತಾಗದ ಕೈಗಳಿಗೆ ಎರಡು ದಿನ ಫುಲ್ ರೆಸ್ಟ್ ...  :-)


ಫೇಸ್ಬುಕ್ ಅಥವಾ e-mail ಮುಖಾಂತರ ಸಹಾ ನಾವು ಸ್ನೇಹಿತರು ಸಂಪರ್ಕದಲ್ಲಿ ಇರಬಹುದು.ಆದರೆ ನೂರೆಂಟು ಸಮಸ್ಯೆ. ಕರೆಂಟ್ ಇಲ್ಲ, ನೆಟ್ವರ್ಕ್ ಪ್ರಾಬ್ಲಂ, ಸ್ನೇಹಿತರು online ಇದ್ದಾಗ ನನಗೆ ಅಡಿಗೆ ಕೆಲಸ. ಒಂದಕ್ಕೊಂದು ಸರಿ ಹೊಂದುವುದಿಲ್ಲ. ಅದೇ ಮೊಬೈಲ್ ಆದರೆ ಎಲ್ಲಿ ಬೇಕು ಅಲ್ಲಿ, ಯಾವಾಗ ಬೇಕು ಆವಾಗ ಉಪಯೋಗಿಸಬಹುದು. ಕೆಲವೊಮ್ಮೆ ಸ್ನೇಹಿತರು ಸುಮ್ಮನೆ 'ಖಾಲಿ ಮೆಸೇಜ್' ಕಳಿಸಿದರು 'ಟುಯ್ ಟುಯ್ ' ಶಬ್ದ ಕೇಳಿ ಇದ್ದ ಬದ್ದ ಕೆಲಸ ಎಲ್ಲ ಬಿಟ್ಟು, ಓಡಿ ಬಂದು ನೋಡಿದ್ದುಂಟು . ಕೊನೆಗೆ ಅವರಿಗೆ 'ತಲೆಹರಟೆ' ಸಾಕು ಅಂತ ಒಂದು ಮೆಸೇಜ್ ಕಳಿಸಿ ಬೈದಿದ್ದುಂಟು.

 ಮೊದಲು ತಿಂಗಳಿಗೆ 200 ರಾಷ್ಟ್ರೀಯ ಮೆಸೇಜ್ ಉಚಿತವಾಗಿ ಇದ್ದದ್ದು, ಕಡಿತಗೊಂಡು ಈಗಂತೂ ಕೇವಲ 100 ರಾಜ್ಯ ಮೆಸೇಜ್ಗಳು...ಇದೆಲ್ಲಾ ಯಾರಿಗೆ ಸಾಲುತ್ತೆ, ಅಂತಾ ಆ ಅಸ್ಸಾಂ ಗಲಾಟೆ ಮಾಡಿದವರಿಗೊಂದಿಷ್ಟು  ಶಾಪ... grrrrrrrrr..... ಅದು ಅಲ್ಲದೇ ಬೇರೆ ರಾಜ್ಯದ ಸ್ನೇಹಿತರಿಗೋಸ್ಕರ ಪ್ರತಿ ತಿಂಗಳು "ನ್ಯಾಷನಲ್ ಎಸ್ ಎಂ ಎಸ್ ರಿಚಾರ್ಜ್ ಪ್ಯಾಕೇಜ್  ಬೇರೆ"...ಇಷ್ಟೆಲ್ಲಾ ಆದ್ರೂ ನಾವು ಸ್ನೇಹಿತರು ತುಂಬಾ ಇಷ್ಟ ಪಡುವ ಒಂದು ಸಂಪರ್ಕ ಸಾಧನ... :-)

ದಿನ ಬೆಳಗಾದ್ರೆ 'ಗುಡ್ಮಾರ್ನಿಂಗ್'ನಿಂದ ಪ್ರಾರಂಭ ಆಗೋ ನಾನು ಮತ್ತು ನನ್ನ ಸ್ನೇಹಿತರ ಸಂದೇಶಗಳು ಅವತ್ತಿನ ತಿಂಡಿ,ಊಟ, ಮಕ್ಕಳ ಸ್ಕೂಲ್, ಪಾಠ , ಹೋಂವರ್ಕ್ , ಸಿನೆಮಾ, ಧಾರಾವಾಹಿಗಳು, ಜೋಕ್ಸ್, ಟೂರ್,ವಾಕಿಂಗ್  ...ಬಹುಷಃ  ಯಾವುದೇ ವಿಷಯ ಬಿಡದ ಹಾಗೆ ಚರ್ಚೆ ಮಾಡ್ತಿವಿ. ಸ್ನೇಹಿತರ ಪ್ರೀತಿಯ ಮಾತು, ಜಗಳ, ಸಾಂತ್ವಾನ, ಚರ್ಚೆ,ಕೋಪ ಎಲ್ಲಾ ಈ ಮೆಸೇಜ್ಗಳಲ್ಲಿ ಅಡಗಿರುತ್ತೆ. ರಾತ್ರಿಯ 'ಗುಡ್ ನೈಟ್' ತನಕ ಈ ಸಂದೇಶಗಳು ವಿನಿಮಯ ಆಗ್ತಾ ಇರುತ್ತೆ.




ಈ ಮೆಸೇಜ್ಗಳು ಕೆಲವೊಮ್ಮೆ inboxನಲ್ಲಿ ಅದೆಷ್ಟು ತುಂಬಿರುತ್ತೆ ಅಂದ್ರೆ, ಹೊಸ ಸಂದೇಶಗಳಿಗೆ ಜಾಗವೇ ಇರುವುದಿಲ್ಲ.  ಆದರೂ ಆ ಹಳೆಯ ಮೆಸೇಜ್ಗಳನ್ನು delete ಮಾಡಲು ಮನಸ್ಸು ಬರುವುದಿಲ್ಲ. ನನಗೆ ಕೆಲವೊಮ್ಮೆ ಮನಸ್ಸು ಬೇಸರ ಆದಾಗ, ಒಂಟಿಯಾಗಿ ಇದ್ದಾಗ ಈ inbox open ಮಾಡಿ ಓದಿ, ಹಳೆಯ ನೆನಪುಗಳನ್ನು 'ಮೆಲುಕು' ಹಾಕುವ ಅಭ್ಯಾಸ ಬೇರೆ ಇದೆ.  

ಇನ್ನು ಗಮ್ಮತ್ತೆಂದರೆ ಯಾರಾದ್ರೂ ಸ್ನೇಹಿತರು ಬೇರೆ ಊರಿಗೆ ಪ್ರಯಾಣ ಮಾಡ್ತೇನೆ ಅಂದ್ರೆ, ಆರಾಮಾಗಿ 'ಸುಖಪ್ರಯಾಣ' ಅನ್ನೋ ಒಂದು ಸಂದೇಶ.ಆದರೆ ಅವರು ಆ ಜಾಗ ತಲುಪುವುದರೊಳಗಾಗಿ ಹತ್ತಾರು ಮೆಸೇಜ್ ವಿನಿಮಯ ಆಗಿರುತ್ತೆ. ಎಲ್ಲಿದ್ದೀಯಾ..?? ಇನ್ನು ಎಷ್ಟು ದೂರ...?? ಊಟ ಆಯ್ತಾ..?? ಅಕಸ್ಮಾತ್ ಅಪ್ಪಿತಪ್ಪಿ ಆ ಜಾಗದಲ್ಲಿ ನೆಟ್ವರ್ಕ್ ಇಲ್ಲದೇ, ಅವರ ಪ್ರತಿ ಉತ್ತರ ಬರದಿದ್ದರೆ, ಅಥವಾ ತಡವಾಗಿ ಅವರು ಉತ್ತರಿಸಿದರೆ, ಇನ್ನೂ ಚಿಂತೆ. ದೇವರೆ ...ಆರಾಮಾಗಿ ಅವರು ತಮ್ಮ ತಾಣ ತಲುಪಲಿ ಎನ್ನುವ ಹಾರೈಕೆ, ಪ್ರಾರ್ಥನೆ...

ಇನ್ನು ಈ ಮೆಸೇಜ್ಗಳ ಭಾಷೆಯೇ ಬೇರೆ. ಕನ್ನಡ,ಹಿಂದಿ, ಇಂಗ್ಲೀಶ್ ಜೊತೆಗೆ ನಮ್ಮ ಮಾತೃ ಭಾಷೆ ಎಲ್ಲಾ ಒಟ್ಟಾಗಿ ಟೈಪ್ ಮಾಡಿ send ಮಾಡ್ತಾ ಇರ್ತೇವೆ. 'ok' ಅಂತ ಇರೋದೇ ಎರಡಕ್ಷರ , ಅದನ್ನು short ಮಾಡಿ 'k ' ಅಂತ ಟೈಪ್ ಮಾಡ್ತೇವೆ. 

ಪ್ರತಿ ದಿನಾ ಒಂದಷ್ಟು ಆತ್ಮೀಯ ಸ್ನೇಹಿತರು ಮೆಸೇಜ್ ಮಾಡ್ಕೋತಾ  ಇರ್ತೇವೆ. ಎಲ್ಲಾದರೂ ಅಪ್ಪಿತಪ್ಪಿ ಒಬ್ಬ ಸ್ನೇಹಿತರು  ಒಂದು ದಿನ ನಮ್ಮ ಜೊತೆ ಸಂಪರ್ಕದಲ್ಲಿ ಇಲ್ಲ ಅಂದರೆ ಕಾದುಕಾದು ಕೊನೆಗೆ, 'r u ok..???', "where r u.." ಎಂಬ ಕಾಳಜಿಯ ಸಾಲುಗಳು ನಮ್ಮಿಂದ ಹೊರಡುತ್ತೆ. ಒಬ್ಬ ಸ್ನೇಹಿತರ ಸಂಪರ್ಕ ಒಂದು ದಿನ ತಪ್ಪಿದರೆ ಎನೋ ಕಳೆದುಕೊಂಡ ಭಾವನೆ ...ಮನಸ್ಸೆಲ್ಲಾ 'ಇವತ್ತು ಎನೋ missing...missing ...ಅಂತಾ ಇರತ್ತೆ'. ಕೊನೆಗೆ ಅವರು, "ಹೇ ನಾನು ಇವತ್ತು ತುಂಬಾ ಬ್ಯುಸಿ, catch u later"...ಅಂದ್ರೆ ಸಮಾಧಾನದ ನಿಟ್ಟುಸಿರು. ಅಷ್ಟೊಂದು ಭಾಂಧವ್ಯದ ಭಾವ  ಈ ಸಂದೇಶಗಳ ಮೂಲಕ ನಮ್ಮಲ್ಲಿ ಮೂಡಿಸುತ್ತೆ .

ಇವತ್ತು ಜನವರಿ 2. 2013. ಇವತ್ತಿನಿಂದ ಪುನಃ ನಮ್ಮ ಸ್ನೇಹಿತರ ಗುಂಪಿನಲ್ಲಿ ಚಟುವಟಿಕೆ ಪ್ರಾರಂಭ ಆಗಿದೆ. ಮೆಸೇಜ್ toneಗಳ ಶಬ್ದ ಮನೆಯಲ್ಲಿ ಕೇಳಲಿಕ್ಕೆ ಪ್ರಾರಂಭ ಆಗಿದೆ. ಕಳೆದ  ಎರಡು ದಿನಗಳು, ಎಷ್ಟೋ ವರ್ಷಗಳು ಕಳೆದೆವೆನೋ ಎಂಬ  ಭಾವನೆ ನಮ್ಮ ಮನದಲ್ಲಿ. ಇವತ್ತಿನಿಂದ ಪುನಃ ನಮ್ಮ ತರಲೆ, ತಮಾಷೆ, ಪ್ರೀತಿ ಮುಂದುವರಿಯುತ್ತದೆ. :-)

ಆತ್ಮೀಯ ಸ್ನೇಹಿತರೆ,ನನ್ನ ಬ್ಲಾಗಿಗೆ ಭೇಟಿ ಕೊಟ್ಟ ನಿಮಗೆಲ್ಲರಿಗೂ 'ಹೊಸ ವರ್ಷದ ಶುಭಾಶಯಗಳು'. ಎಲ್ಲರಿಗೂ ಈ ವರ್ಷ ಚೆನ್ನಾಗಿರಲಿ.....

ಪ್ರೀತಿಯಿಂದ 

ಸುದೀಪ.....




Thursday, 13 December 2012

ಸಂಖ್ಯಾ ಮಹಾತ್ಮೆ....


ಸ್ನೇಹಿತರೆ ಇದನ್ನು ಲಘು ಹಾಸ್ಯಬರಹ  ಎಂದು ಓದಿ.. ಇದೇನಪ್ಪ ದೇವಿ ಮಹಾತ್ಮೆ ಇದ್ದಂಗೆ ಸಂಖ್ಯಾ ಮಹಾತ್ಮೆ ಅಂದುಕೊಂಡ್ರಾ... ಅದರ ಕಥೆ ಹೇಳ್ತೀನಿ ಕೇಳಿ...ಮನುಷ್ಯನಿಗೆ ಜೀವನದಲ್ಲಿ ಏನೇನೋ ಹುಚ್ಚು ಇರುತ್ತೆ.. ಕೆಲವು ಅಪಾಯಕಾರಿ ಆದರೆ ಇನ್ನು ಕೆಲವು, ಯಾರಿಗೂ ತೊಂದರೆ ಆಗದೆ ಇರುವಂಥದ್ದು..ಕೆಲವರ  ಹುಚ್ಚು ಕೆಲಸಗಳು, ಬೇರೆಯವರ  ಕಣ್ಣಿಗೆ ಕಾಣ್ಸತ್ತೆ...ಇನ್ನು ಕೆಲವರ ಹುಚ್ಚು ಅವರ  ಮನಸ್ಸಲ್ಲೇ ಇದ್ದು, ಅವರು ಮಾತ್ರ ಅದನ್ನ ಅನುಭವಿಸ್ತಾ ಇರ್ತಾರೆ..

ನನ್ನ ಬಗ್ಗೆ ಹೇಳ್ಬೇಕಂದ್ರೆ, ನನಗೂ ಒಂದು ರೀತಿ ಈ ಹುಚ್ಚು(ಕ್ರೇಜ್) ಇದೆ ಅನ್ನಬಹುದು. ಇದು ಸಹಾ ಒಂದು ರೀತಿ ಮನಸ್ಸಿನ್ನಲ್ಲೇ ಯಾವಾಗಲೂ ಮೂಡೋ ಒಂದು ತರಹದ ನಂಬಿಕೆ,ವಿಶ್ವಾಸ,ಕಲ್ಪನೆ. ಈ ಬಗ್ಗೆ ಯೋಚನೆ ಮಾಡಿದಾಗೆಲ್ಲ ನನ್ನಷ್ಟಕ್ಕೆ ನಾನೇ ನಗ್ತೀನಿ... ಇದರಿಂದ ಲಾಭ ಅಥವಾ ನಷ್ಟ ಇಲ್ಲ ಅಂತ ಗೊತ್ತಿದ್ದರೂ ನಿತ್ಯದ ಜೀವನದಲ್ಲಿ ಮುಂದುವರಿತಾ ಹೋಗ್ತಾನೆ  ಇದೆ.... :-)


ನನಗೆ "ಸಂಖ್ಯೆ ಒಂದು" ಅಂದ್ರೆ ಅದೊಂಥರಾ ಪ್ರೀತಿ...ಪ್ರತಿ ಬಾರಿಯೂ, ಎಲ್ಲೆಡೆಯೂ ಅದನ್ನು ಹುಡುಕ್ತಾ ಇರ್ತೇನೆ. ಅದೊಂಥರಾ "ಅದೃಷ್ಟ " ಅಥವಾ "ಲಕ್ಕಿ ನಂಬರ್" ಅಂತಾರಲ್ಲ ಆ ಭಾವನೆ....

 ನಾನು ಹುಟ್ಟಿದ್ದು "ಒಂದನೇ ತಾರೀಕು", ಜೊತೆಗೆ ತಿಂಗಳು ಅಕ್ಟೋಬರ್ ಅಂದ್ರೆ ಹತ್ತನೇ ತಿಂಗಳು ..ಅದರಲ್ಲೂ "ಒಂದು" ಇದೆ..ಹೀಗಾಗಿ ಸಂಖ್ಯೆ ಒಂದು  ನನ್ನನ್ನು ಜನ್ಮದಿಂದ ಹಿಂಬಾಲಿಸಿ ಬರ್ತಾ ಇದೆ ಅನ್ಸುತ್ತೆ...ಬಹುಷಃ  ಇದು ನನ್ನ ಕೊನೆ ಉಸಿರು ಇರೋವರೆಗೋ ಹೀಗೆ ಮುಂದುವರಿತದೋ ಏನೋ ಎಂದು ಕೆಲವೊಮ್ಮೆ ಅನಿಸುವುದುಂಟು.....


ನನಗೆ ನೆನಪಿದ್ದ ಹಾಗೆ ಇದು ತುಂಬಾ ವರ್ಷ ಹಿಂದಿನ ನೆನಪು. ಹತ್ತನೇ ತರಗತಿ ಓದುತ್ತಿದ್ದಾಗ ಮಾರ್ಚ್-ಏಪ್ರಿಲ್ ಪರೀಕ್ಷೆಯಲ್ಲಿ,  ಹಾಲ್ ಟಿಕೆಟ್ ನಂಬರ್ ಸುಮಾರು ಆರು ಅಥವಾ ಏಳು ಸಂಖ್ಯೆಯದಿತ್ತು . ಆ ಪರೀಕ್ಷೆ ಕೊಠಡಿಯಲ್ಲಿ ಕುಳಿತು ಎಲ್ಲಾ ಸಂಖ್ಯೆಯನ್ನು ಕೂಡಿಸಿ ಎಲ್ಲಾದರೂ ಒಂದು ಬರುತ್ತಾ ಎಂದು ಲೆಕ್ಕ ಮಾಡಿದ್ದು ಈಗಲೂ ನೆನಪಿದೆ. ಆ ಸಂಖ್ಯೆ ಒಂದು   ಬಂದರೆ ಪಾಸಾಗ್ತಿನಿ ಅನ್ನೋ ಹುಚ್ಚು ಕಲ್ಪನೆ... :-)

ಈ ಚಾಳಿ ಈಗಲೂ ಮುಂದುವರಿತಾ ಇದೆ. ಇತ್ತೀಚಿನ ನೆನಪೆಂದರೆ, ನನಗೆ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳೆಂದರೆ ತುಂಬಾ ಪ್ರೀತಿ . ಪ್ರತಿ ವರ್ಷ ರಾಘವೇಂದ್ರ ಸ್ವಾಮಿಗಳ ಆರಾಧನೆಯ ನೇರಪ್ರಸಾರವನ್ನು 'ಈ ಟಿ ವಿಯಲ್ಲಿ " ಪ್ರಸಾರ ಮಾಡುತ್ತಾರೆ. ಕಳೆದ ವರ್ಷವೂ ಮಧ್ಯಾಹ್ನ ಹೀಗೆ ಟಿ ವಿ ನೋಡ್ತಾ ಇದ್ದೆ. ಮಂಗಳಾರತಿಯ ಸಮಯ. ಹಿನ್ನಲೆಯಲ್ಲಿ ಡಾ. ರಾಜಕುಮಾರ್ ಅವರ ಈ ಹಾಡು ಬರ್ತಾ ಇತ್ತು. 

"ವಾರ ಬಂತಮ್ಮ ಗುರುವಾರ ಬಂತಮ್ಮ, ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ ,ಸ್ಮರಣೆ ಮಾತ್ರದಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ...
ಯೋಗಿ ಬರುವನಮ್ಮ, ಶುಭ ಯೋಗ ಬರುವುದಮ್ಮ , ರಾಘವೇಂದ್ರ ಗುರುರಾಯ ಬಂದು ಭವ  ರೋಗ ಕಳೆವನಮ್ಮ ...
ಮನವ ತೊಳೆಯಿರಮ್ಮ , ಭಕ್ತಿಯ ಮಣೆಯ  ಹಾಕಿರಮ್ಮ , ಧನ್ಯದಿಂದ ಕರೆದಾಗ ಬಂದು ಒಳಗಣ್ಣ ಬೆರೆವನಮ್ಮ ...
ಕೋಪ ಅರಿಯನಮ್ಮ ಯಾರನು ದೂರ ತಳ್ಳನಮ್ಮ , ಪ್ರೀತಿ ಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮ ....
ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ, ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ.........." 

ಈ ಹಾಡು ಕೇಳ್ತಾ ಆರತಿ ನೋಡ್ತಾ, ಗೋಡೆ ಮೇಲಿದ್ದ ಗಡಿಯಾರ ನೋಡಿದ್ರೆ "ಸರಿಯಾಗಿ  ಒಂದು ಘಂಟೆ ಸಮಯ"...ಅದೇಕೋ ಗುರುರಾಯರ ಆಶೀರ್ವಾದ ಆಯ್ತು ಅನ್ನೋ  ಸಂತೋಷದ ಕಲ್ಪನೆ  .... :-)

ಇನ್ನು ಗಮ್ಮತ್ತಿನ ವಿಷಯ ಅಂದ್ರೆ ಮನೆಗೆ ಕಂಪ್ಯೂಟರ್ ಬಂದ ಮೇಲೆ ಕುತೂ ಹಲದಿಂದ  ಗೂಗಲ್ ನಲ್ಲಿ "ನ್ಯುಮರೋಲಾಜಿ" ಬಗ್ಗೆ ಓದಿದ್ದು ..ಸಂಖ್ಯೆ  ೧ ಅಂದರೆ ಸೂರ್ಯ ಅದಕ್ಕೆ ಅಧಿಪತಿ,  ಒಂದನೇ ತಾರೀಕಿನಲ್ಲಿ ಹುಟ್ಟಿದವರಿಗೆ ಯಾವುದು ಶುಭ,ಅಶುಭ ಇತ್ಯಾದಿ  ಅನ್ನುವ ಎಲ್ಲಾ  ವಿಷಯ ಓದಿದ್ದು ... ಈ ವಿಷಯ ನಗು ಬರುವಂಥಹದ್ದೆ  ಆದ್ರೂ ಸತ್ಯ ಘಟನೆ... :-) 

ಪ್ರಪಂಚದಲ್ಲಿ ಎಲ್ಲ ಮನಸ್ಥಿತಿಯ ಜನರು ಇರ್ತಾರೆ ..ಅದರಲ್ಲಿ ನಾನು ಒಬ್ಬಳು. ಸ್ನೇಹಿತರೆ ನನ್ನ ಹಾಗೆ ನಿಮಗೂ ಏನಾದರೂ ಈ ರೀತಿಯ ಅಭ್ಯಾಸಗಳು ಇದ್ದರೆ ಮುಕ್ತವಾಗಿ ಹಂಚಿಕೊಳ್ಳಿ ....

ಪ್ರೀತಿಯಿಂದ

ಸುದೀಪ....






Thursday, 6 December 2012

ನೀಲಿ ಪರ್ಸನಲ್ ಡೈರಿ.....


 ಮೊನ್ನೆ ಮನೇಲಿ ವಾರ್ಡ್ ರೋಬ್ ಕ್ಲೀನ್ ಮಾಡೋವಾಗ ಈ ನೀಲಿ ಪರ್ಸನಲ್ ಡೈರಿ ಸಿಕ್ತು... ಹಾಗೆ ಒಂದೊಂದೆ ಪುಟ ತೆಗಿಬೇಕಾದ್ರೆ ಸಾವಿರಾರು ಹಳೆ ನೆನಪುಗಳು.... ಇದು ಸುಮಾರು ಹದಿನಾಲ್ಕು ವರ್ಷದ ಹಿಂದಿನ ಡೈರಿ... 1998 ಇಸವಿದು....ಅಂಥದ್ದೇನಿದೆ ಇದರಲ್ಲಿ...???!!!!!
  



ಆಗ ನಾನು ಅಂತಿಮ ಬಿಕಾಂ ಓದ್ತಿದ್ದ ವರ್ಷ... ಯಾವಾಗಲು ಕಾಲೇಜ್ನಲ್ಲಿ ಜನವರಿ-ಫೆಬ್ರವರಿ ತಿಂಗಳು ಬಂತು ಅಂದ್ರೆ ಅಂತಿಮ ವರ್ಷದ ವಿಧ್ಯಾರ್ಥಿಗಳೆಲ್ಲ ಒಂದು ರೀತಿ busy ಅಂತಾನೆ ಹೇಳಬಹುದು.. ಅಂತಿಮ ವರ್ಷದ ಪರೀಕ್ಷೆಯ ತಯಾರಿಗಲ್ಲ.... ಸ್ನೇಹಿತರಿಂದ "ಆಟೋಗ್ರಾಫ " ಸಂಗ್ರಹಿಸುವ ಕೆಲಸದಲ್ಲಿ.... :) ಕಾಲೇಜಿನ ಆತ್ಮೀಯ ಜೂನಿಯರ್ಸ್ ಸ್ನೇಹಿತರು  , ಲೆಕ್ಚರರ್ಸ್ ಹತ್ರಾ ಎಲ್ಲಾ ಪುಸ್ತಕ ಕೊಟ್ಟು ಪ್ಲೀಸ್ ಏನಾದ್ರೂ ಬರೆದು ಕೊಡಿ ಎಂಬ ದೃಶ್ಯ ಸಾಮಾನ್ಯ, ಎಲ್ಲರ ಪುಸ್ತಕಗಳಲ್ಲೂ ಅದೇ ಅದೇ ಕಾಪಿ-ಪೇಸ್ಟ್ ವಾಕ್ಯಗಳು ...ಹೊಸದಾಗಿ ಏನು ಬರಿಬೇಕಂತ ತಲೆಗೆ ಹೊಳಿತಾನೆ ಇರಲಿಲ್ಲ     :-)

ನಿಜಕ್ಕೂ ಆ ಸಮಯ  ಸ್ವಚ್ಚಂದ ಜೀವನಕ್ಕೆ ವಿದಾಯ ಹೇಳುವ ಕಾಲಘಟ್ಟ  ಅಂತಾನೆ  ಹೇಳಬಹುದು..ಕಾಲೇಜಿನ ಹುಡುಗಾಟಿಕೆ ಬಿಟ್ಟು ಸಮಾಜದಲ್ಲಿ ಒಂದು ಜವಾಬ್ದಾರಿ ವಹಿಸುವ ವ್ಯಕ್ತಿಗಳಾಗಿ ಮೂಡುವ  ದಿನಗಳವು... 


ಮೊನ್ನೆ ಕೂತುಕೊಂಡು ಡೈರಿ  ತೆರೆದಾಗ ಮೊದಲ ಪುಟದಲ್ಲಿ ನನ್ನ ಅಕ್ಷರಗಳ ಸಾಲುಗಳು ಹೀಗಿತ್ತು....೧೪ ವರ್ಷದ ಹಿಂದೆ ಈ ರೀತಿ ಬರೆಯುವ ಅಭ್ಯಾಸ...ಯಾವಾಗಲು ಕಪ್ಪು ಇಂಕ್ ಪೆನ್ ಉಪಯೋಗಿಸ್ತಿದ್ದೆ... ಅದು ಹೀರೋ ಕಂಪನಿದು... :) 



ಆಗ ಆಟೋಗ್ರಾಫ್ ಪುಸ್ತಕ ಅಂತಂದ್ರೆ ಆ ವರ್ಷದ ಹೊಸ ಡೈರಿಯನ್ನ ನಾವು ಉಪಯೋಗಿಸ್ತಾ ಇದ್ವಿ...ಕೆಲವು ಸ್ನೇಹಿತರು ತಮ್ಮ ಜನ್ಮದಿನಾಂಕದ ಪುಟದಲ್ಲಿ ಬರೆದು ಕೊಡೋವ್ರು....


ಕಾಲೇಜಲ್ಲಿ ನನ್ನ ಐವರು ಸ್ನೇಹಿತೆಯರದ್ದು ಒಂದು ಗುಂಪು... ಯಾವಾಗಲು ತಲೆಹರಟೆ, ಕಿತಾಪತಿ, ನಗು,ನಮ್ಮದೇ ಪ್ರಪಂಚದಲ್ಲಿ ನಾವು....ಸುಂದರ ದಿನಗಳವು.... ನಮ್ಮ ಗ್ರೂಪಿಗೆ ಕೆಲವರು "five stars" ಅಂತ ಕರೆಯೋವ್ರು....ನಮ್ಮ ಎಲ್ಲರ ಪುಸ್ತಕಗಳಲ್ಲೂ vps3 ಅಂತ ಬರ್ದಿರ್ತಿತ್ತು ....ಹಂಗಂದ್ರೆ ವಾಣಿ, ಪ್ರತಿಮ,ಸುಷ್ಮಾ , ಸುಮ ಮತ್ತು ಸುಮತಿ .. :) ಒಬ್ಬರಿಗಿಂತ    ಒಬ್ಬರು ತಲೆಹರಟೆಗಳು ಅನ್ನಬಹುದು...ಆ ವಯಸ್ಸೇ ಹಾಗೆನೋ ....ಈಗೆಲ್ಲ ಬರಿಯ ನೆನಪುಗಳು...  ಈಗ ಐದು ಜನ ಐದು ಊರುಗಳಲ್ಲಿ ....ಅದೆಷ್ಟು ವರ್ಷ ಆಯ್ತೋ ಎಲ್ಲರು ಒಟ್ಟು ಸೇರಿ.... :(

ಆ ನಾಲ್ವರಲ್ಲೂ ನನ್ನ ಆತ್ಮೀಯ ಸ್ನೇಹಿತೆ ಅಂದ್ರೆ "ಸುಮ "...ನನ್ನ ಹೆಸರನ್ನೇ ಅರ್ಧ 
ಹಂಚಿಕೊಂಡಿದ್ದಳು ಸಹಾ.... ಇಬ್ಬರಲ್ಲೂ "ಗುಟ್ಟು " ಎಂಬ ಶಬ್ದವೇ ಇರಲಿಲ್ಲ...ಎಲ್ಲವನ್ನು ಹಂಚಿಕೊಂಡ ಸ್ನೇಹಿತೆ ಎನ್ನಬಹುದು...

ಆಕೆ ಬರೆದುಕೊಟ್ಟ ಕೆಲವು ಸಾಲುಗಳು ಹೀಗಿತ್ತು ನನ್ನ ಪುಸ್ತಕದಲ್ಲಿ... 










ನಂತರದ ಇನ್ನೊಬ್ಬ ಸ್ನೇಹಿತೆ "ಪ್ರತಿಮ "....ನಮ್ಮ ಐವರ ಗುಂಪಿನ ಇನ್ನೊಬ್ಬ ಗೆಳತಿ... ಅವಳ ಕೆಲವು ನೆನಪಿನ ಬುತ್ತಿ  ನನ್ನ ಪುಸ್ತಕದಲ್ಲಿ....







ಇನ್ನೊಬ್ಬ  ಆತ್ಮೀಯ ಸ್ನೇಹಿತೆ ಸುಷ್ಮಾ.... ಕಾಲೇಜ್ ಜೀವನದಲ್ಲಿ ಮರೆಯಲಾಗದ ಗೆಳತಿ...ಅವಳು ಪ್ರೀತಿಯಿಂದ ಬರೆದು ಕೊಟ್ಟ ಅಕ್ಷರಗಳು....





ವಾಣಿ ಎಂಬ ಗೆಳತಿಯ ಹಸ್ತಾಕ್ಷರ ಮಾತ್ರ ಮಿಸ್ಸಿಂಗ್ ಈ ಪುಸ್ತಕದಲ್ಲಿ... :( .ಅಂತಿಮ ಬಿಕಾಂ ಕಲಿಯುವಾಗಲೇ ಮದುವೆಯಾದ ಸ್ನೇಹಿತೆ... :)
 

 ಒಬ್ಬ ಸ್ನೇಹಿತೆ ಮಾತ್ರ ೧ ವರ್ಷದಿಂದ ಜೊತೆಗಿದ್ದರೂ ಆತ್ಮಿಯಳಾಗಿದ್ದು ಮಾತ್ರ ಅಂತಿಮ ವರ್ಷದ ಕೊನೆಯ ಕೆಲವು ತಿಂಗಳುಗಳಲ್ಲಿ....ನೋಡಲು ಸುಂದರವಾಗಿದ್ದ ಆ ಗೆಳತಿಯ ಮನಸ್ಸು ತುಂಬಾ ಮೃದು, ಕೋಮಲ.... ಆ ಗುಣಕ್ಕೆ ಬಹುಷಃ ಮನಸೋತಿದ್ದೆ ನಾನು... ಅವಳ ಹೆಸರು ಸಾವಿತ್ರಿಯಾಗಿದ್ದರು, ಅದೇಕೋ  ನಾನು ಅವಳನ್ನು ಪ್ರೀತಿಯಿಂದ "ತನುಜ" ಅಂತ ಕರಿತಿದ್ದೆ... ಈಗಲೂ ತುಂಬಾ ನೆನಪಾಗುವ ಮುದ್ದು ಹುಡುಗಿ...ಈಗ ಸಂಪರ್ಕದಲ್ಲೇ ಇಲ್ಲ ಎನ್ನುವ ಬೇಸರ ಕಾಡ್ತಾ ಇರತ್ತೆ....

ಆಕೆ ಬರೆದು ಕೊಟ್ಟ ಕೆಲವು ಸಾಲುಗಳು ಹೀಗಿತ್ತು .....



ಪ್ರೀತಿಯ ಅಣ್ಣ "ಗುರು " ದಾವಣಗೆರೆಯಲ್ಲಿ ಇದ್ದರೂ ಅವನು ಊರಿಗೆ ಬಂದಾಗ ಪುಸ್ತಕ ಕೊಂಡು ಹೋಗಿ ಬರೆದು ಕೊಟ್ಟ ಕೆಲವು ಸಾಲುಗಳು....ಸಂಬಂಧಿಯಾಗಿದ್ದರೂ ಕೇವಲ ಪತ್ರಗಳ ಮೂಲಕವೇ ನಮ್ಮಿಬ್ಬರ  ಆತ್ಮೀಯತೆ.... ನನ್ನನ್ನು "ದೀಪು"  ಎಂದು ಕರೀತಿದ್ದ ....... ಹೀಗಿತ್ತು ಅವನ ಪದಗಳು ನನ್ನ ಡೈರಿಯಲ್ಲಿ ....











ನಮ್ಮ ಪ್ರಾಧ್ಯಾಪಕರಾದ "ನಟರಾಜ್ ಅರಳಸುರುಳಿ" ಅವರು ಬರೆದುಕೂಟ್ಟ ಪುಟವಿದು...ಅವರೊಬ್ಬ cartoonist ಸಹಾ..... :)


ಇನ್ನು ಅದೆಷ್ಟೋ ಸ್ನೇಹಿತರ ಸಾಲುಗಳಿವೆ ಈ ಡೈರಿಯಲ್ಲಿ....ತುಂಬಾ ಪ್ರೀತಿಪಾತ್ರರ ನೆನಪನ್ನ ಮಾತ್ರ ಇಲ್ಲಿ ನೆನೆಸಿಕೊಂಡಿದ್ದೇನೆ....

ಹೀಗೆ ಒಂದು ಪುಸ್ತಕ ಕಾಲೇಜು ದಿನಗಳ ನೂರಾರು ನೆನಪುಗಳನ್ನು ಹೊತ್ತು  ತಂದು ಬಿಡ್ತು .... ಆಗೆಲ್ಲ ನಮ್ಮ ಸೀನಿಯರ್ ವಿಧ್ಯಾರ್ಥಿಗಳು, ಪ್ರತಿವರ್ಷ  ಆಟೋಗ್ರಾಪ್ ಹಾಕಿಸಕೊಳ್ತಾರೆ ...ಹಾಗೆ ನಾವು ಅವರನ್ನ ಫಾಲೋ ಮಾಡೋದು...ಅಂತ ತಿಳಿದಿದ್ದ ಹುಡುಗಾಟದ ದಿನಗಳವು... ಆದರೆ ಅದರ ಬೆಲೆ ಏನು ಅಂತ ನಿಜ ಅರ್ಥದಲ್ಲಿ ತಿಳಿದಿದ್ದು ಈಗಲೇ...ಎಷ್ಟೊಂದು ಹಳೆಯ ಮಧುರ ನೆನಪನ್ನು ಈ ಪುಸ್ತಕದ ಮುಖಾಂತರ ಸವಿಬಹುದು ಎಂಬ ಚಂದದ ಪಾಠ ಕಲಿಸಿಕೊಟ್ಟು ಬಿಡ್ತು... :-) 

ಪ್ರೀತಿಯಿಂದ

ಸುದೀಪ....














Thursday, 29 November 2012

ಸೈಡ್ ವ್ಯೂ ಮಿರರ್ ಕ್ರಷ್ ....




ರಕ್ಷಾ ಒಂಭತ್ತನೇ ತರಗತಿ ವಿಧ್ಯಾರ್ಥಿನಿ .... ಹದಿನಾಲ್ಕು ವರ್ಷದ ಹುಡುಗಿ ....ಆಗಷ್ಟೇ ಮೊಗ್ಗರಳಿ ಹೂವಾದ ವಯಸ್ಸು...ಆ ಸೌoದರ್ಯ  ಅವಳ ಮೈ ಮನವನ್ನು ತುಂಬಿ ಇನ್ನೂ ಆಕರ್ಷಿಸುತ್ತಿತ್ತು...ಒಮ್ಮೆ ನೋಡಿದರೆ ತಿರುಗಿ ಇನ್ನೊಮ್ಮೆ ನೋಡಬೇಕು ಎನ್ನುವ ರೂಪ...ಮನೆ ಹತ್ತಿರವೇ ಇರುವ ಹೈಸ್ಕೂಲ್ ....ನಡೆದುಕೊಂಡು ಹೋದರೆ ಸುಮಾರು ಹತ್ತು ನಿಮಿಷದ ದಾರಿ.... ಮನೆ ಹತ್ತಿರದ ಇಬ್ಬರು ಸ್ನೇಹಿತೆಯರ ಜೊತೆ ದಿನವೂ ಅವಳು ಶಾಲೆಗೆ ಹೋಗಿಬರುತ್ತಿದ್ದಳು....


ಶಾಲೆಗೆ ಹೋಗುವ ದಾರಿಯಲ್ಲಿ ಅದೊಂದು ಟ್ಯಾಕ್ಸಿ ಸ್ಟ್ಯಾಂಡ್ .... ಅಲ್ಲಿಯ ಚಾಲಕರು ಹೆಚ್ಚು ಕಮ್ಮಿ ಪರಿಚಿತರೇ ...ದಿನವೂ  ನೋಡುವ ಮುಖಗಳೇ ....ಆಗ ಮಳೆ ಕಡಿಮೆಯಾಗುತ್ತಿದ್ದ ಸಮಯ...ದಿನಕ್ಕೊಮ್ಮೆ ಎಲ್ಲೋ ಸಣ್ಣ ತುಂತುರು ಮಳೆ... ಆ ದಿನ ಸಹಾ ಬೆಳಿಗ್ಗೆ 9 ಗಂಟೆ ಸಮಯ ...ಮೂವರು ಸ್ನೇಹಿತೆಯರು ಮಾತಾಡುತ್ತಾ ಶಾಲೆಯತ್ತ  ನಡೆಯುತಿದ್ದರು....ಸಣ್ಣದಾಗಿ ಮಳೆ ಪ್ರಾರಂಭವಾಯ್ತು  ...ತಮ್ಮ ಛತ್ರಿ ಬಿಡಿಸಿ ಮುಂದೆ ಸಾಗುವಾಗ ರಕ್ಷಾಗೆ ಟ್ಯಾಕ್ಸಿ ಸ್ಟ್ಯಾಂಡ್ನಲ್ಲಿ ಯಾವುದೋ ಹೊಸ ಮುಖ ನೋಡಿದ ಹಾಗೆ....ಪುನಃ ತಿರುಗಿ ನೋಡಿದರೆ ತಪ್ಪಾಗುತ್ತದೆ ಎಂದು ಸುಮ್ಮನೆ ಶಾಲೆಯತ್ತ ಹೆಜ್ಜೆ ಹಾಕುತ್ತಾಳೆ... ಶಾಲೆ ಮುಗಿಸಿ ಸಂಜೆ ಮನೆಗೆ ಮರಳುವಾಗಲು  ಕುತೂಹಲ....ಆದರೆ ಸ್ಟ್ಯಾಂಡ್ ನಲ್ಲಿ ಆ ಹೊಸ ಮುಖದ ಸುಳಿವಿಲ್ಲ....

ಮರುದಿನ ಶಾಲೆಗೆ ಹೋಗುವಾಗ ಟ್ಯಾಕ್ಸಿ ಸ್ಟ್ಯಾಂಡ್ನಲ್ಲಿ  ಹೊಸದೊಂದು ಹೊಳೆಯುವ ಗಾಡಿಯನ್ನು  ದೂರದಿಂದಲೇ ರಕ್ಷಾ ಗುರುತಿಸುತ್ತಾಳೆ...ಅದರ ಹತ್ತಿರ ಬರುವಾಗ, ಡ್ರೈವರ್ ಸೀಟಿನಲ್ಲಿ ಕೂತ ವ್ಯಕ್ತಿ,  ಹತ್ತಿರ ಇರುವ ಸೈಡ್ ಮಿರರ್ನಿಂದ ಇವಳನ್ನೇ ನೋಡುತ್ತಿದ್ದಾನೆ...ಅವಳ ಕಣ್ಣು ಅದೇ ಸಮಯಕ್ಕೆ ಕನ್ನಡಿ ನೋಡಿ ತನ್ನನ್ನು ಗಮನಿಸುವ  ಕಣ್ಣುಗಳನ್ನು   ಕಂಡು ಕೂಡಲೇ ತಲೆತಗ್ಗಿಸಿ ಮುಂದೆ ಸಾಗುತ್ತಾಳೆ ...ಇಬ್ಬರ ದೃಷ್ಟಿ ಒಂದು ಕ್ಷಣಕ್ಕೆ ಅಲ್ಲಿ ಒಂದಾಗಿಬಿಟ್ಟಿತ್ತು ...ಆದರೆ ಒಂದೇ  ಕ್ಷಣ ನೋಡಿದ ಆ ಕನ್ನಡಿಯಲ್ಲಿನ ಮುಖ ರಕ್ಷಾಳ  ಮನಸ್ಸಿನಲ್ಲಿ ಅಚ್ಚಾಗಿರುತ್ತದೆ.....ಸುಮಾರು 23-24  ವರ್ಷದ ಹುಡುಗ ಇರಬಹುದು ....ಕುಡಿ ಮೀಸೆ, ಸಿನೆಮಾ ನಟನಂತೆ ಕಾಣುವ ಚಂದದ ಮುಖ, ಕಪ್ಪು ಕಣ್ಣುಗಳು.....ಏನೋ ಆಕರ್ಷಣೆ .....





ಶಾಲೆಗೆ ಹೋದರೂ ಆ ಮುಖವೇ ಕಣ್ಣ ಮುಂದೆ...ಪಾಠದ ಕಡೆ ಗಮನವೇ ಇಲ್ಲ...ಯಾವಾಗ ಸಂಜೆ ಆಗುತ್ತದೋ ..ಪುನಃ ಅವನನ್ನು ಯಾವಾಗ ನೋಡುತ್ತೇನೋ ಎಂಬ ಕಾತುರ....ಆ ವಯಸ್ಸೆ ಹಾಗೆ ಏನೋ ಸುಂದರವಾಗಿ ಕಂಡದ್ದು  ಪುನಃ ಪುನಃ ನೋಡಬೇಕೆಂಬ ಆತುರ , ಕಾತುರ...ಸಂಜೆ ಸಮಯ ಪುನಃ ಅದೇ ಕಣ್ಣುಗಳು ಅವಳನ್ನು ಹಿಂಬಾಲಿಸುತ್ತಿರುತ್ತದೆ...ಅವನ ನೆನಪಲ್ಲೇ ಮನೆಯಲ್ಲಿ ಸಮಯ ಕಳಿತಾಳೆ .....

ಹೀಗೆ ದಿನಗಳು ಸಾಗುತ್ತಿರುತ್ತದೆ...ಒಂದು ದಿನ ಒಬ್ಬ ಡ್ರೈವರ್ ಗಟ್ಟಿಯಾಗಿ.."ಲೋ...ಸೂರಜ್ ...ಇಲ್ಲಿ ಬಾ..." ಅಂತ ಕರೆದಾಗ ಆ ಹುಡುಗ ,...."ಹಾ...ಬಂದೆ" ಅಂತಾ ಓಡ್ತಾನೆ ..ಆಗ ಇದನ್ನು ಕೇಳಿಸಿಕೊಂಡ ರಕ್ಷಾ ...ಎಷ್ಟು ಚಂದದ ಹೆಸರು ಅಂತ ಮನಸ್ಸಿನಲ್ಲೇ ಅಂದುಕೊತಾಳೆ... ತನ್ನ ಎಲ್ಲ ಶಾಲೆಯ ಪುಸ್ತಕದ ಕೊನೆಯ ಪುಟದಲ್ಲೂ  ಯಾರಿಗೂ ತಿಳಿಯದಂತೆ "ಸೂರಜ್ ..ಸೂರಜ್ ..."ಎನ್ನುವ ಅಕ್ಷರಗಳು ಗೀಚುತ್ತಾಳೆ .... ಇಷ್ಟಾದರೂ ಅವಳ ಸ್ನೇಹಿತೆಯರಿಗೆ ಇದರ ಸುಳಿವೇ ಇರುವುದಿಲ್ಲ....


ದಿನಾ ಬೆಳಿಗ್ಗೆ, ಸಂಜೆ  ಶಾಲೆಯ ಹೋಗುವ ಬರುವ ಸಮಯದಲ್ಲಿ ಹುಡುಗನ ದೃಷ್ಟಿ ಮತ್ತು ರಕ್ಷಾಳ ನೋಟ ಆ ಸೈಡ್ ಮಿರರ್ ಮೇಲೆ...ಹತ್ತಿರ  ಬಂದ ಕೂಡಲೇ ಇಬ್ಬರೂ ತಮ್ಮ ನೋಟ ಬದಲಿಸುವುದು...ಹೀಗೆ ಅದೆಷ್ಟು ದಿನಗಳು ಕಳೆದವೋ ..ಇಬ್ಬರಿಗೂ ತಿಳಿಯದು...ಬರಬರುತ್ತ ಸಣ್ಣ ಮುಗುಳ್ನಗು ಕನ್ನಡಿಯಲ್ಲಿ ವಿನಿಮಯ ಆಗಲಿಕ್ಕೆ ಪ್ರಾರಂಭ ಆಗುತ್ತೆ..... ಆ ಸಣ್ಣ ನಗುವಿನಲ್ಲಿ ಅದೇನೋ ಗೆದ್ದ ಆನಂದ ಇಬ್ಬರಿಗೂ....ಅವನು ಎಲ್ಲಾದರು ಟ್ರಿಪ್ಗೆ ಹೋದರೆ ರಕ್ಷಾಳ ಮನಸ್ಸು ಖಾಲಿ ಖಾಲಿ..ಇನ್ನು ಯಾವಾಗ ಅವನನ್ನು ನೋಡ್ತಿನೋ ಎಂಬ ಆತಂಕ...

ಹಾಗೆಯೇ ಒಮ್ಮೆ 4 ದಿನ ಕಳೆದಿತ್ತು .ಮದುವೆ  ಸೀಸನ್ ಬೇರೆ....ಹುಡುಗನ ಸುಳಿವೇ ಇಲ್ಲ ...ಅವನ ಯೋಚನೆಯಲ್ಲಿ ರಕ್ಷಾ  ದಿನ ದೂಡುತ್ತಿರುತ್ತಾಳೆ....ಅವತ್ತು  ಬೆಳಿಗ್ಗೆ ತಾಯಿ ಕೊಟ್ಟ ತಿಂಡಿ ತಿನ್ನುತ್ತ ಅಲ್ಲಿಯೇ ಟೀಪಾಯಿ  ಮೇಲೆ ಇದ್ದ ಪೇಪರ್ ನೋಡಿ ಸೂಕ್ಷ್ಮ ಮನಸ್ಸಿನ ರಕ್ಷಾ ಹೃದಯಾಘಾತದಿಂದ ಕುಸಿದು ಬೀಳ್ತಾಳೆ  ....

ಕಾರಣ...... ಪತ್ರಿಕೆಯ ಮುಖಪುಟದಲ್ಲಿ  ಕಂಡ  ಸುದ್ಧಿ .....

ಚಿತ್ರದುರ್ಗ: ಭೀಕರ ಅಪಘಾತ

ಸೂರಜ್ ಎಂಬ 24 ವರ್ಷದ ಚಾಲಕ ಸ್ಥಳದಲ್ಲೇ ಸಾವು.....
ಚಿತ್ರದುರ್ಗದಲ್ಲಿ ಮದುವೆ ಮುಗಿಸಿ ಬೆಂಗಳೂರಿಗೆ ಹೊರಟಿದ್ದ ಟ್ಯಾಕ್ಸಿ, ಹಿಂದಿನಿಂದ ಢಿಕ್ಕಿ ಹೊಡೆದ ಟ್ರಕ್ ನ ರಭಸಕ್ಕೆ ಪಕ್ಕದ ಗದ್ದೆಯಲ್ಲಿ ಉರುಳಿ ಗಾಡಿಯ ನಿಯಂತ್ರಣ ಸಿಗದ ಚಾಲಕ ಸ್ಥಳದಲ್ಲೇ ಜವರಾಯನ ತೆಕ್ಕೆಗೆ...ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ ಉಳಿದ ನಾಲ್ವರ ಸ್ಥಿತಿ  ಗಂಭೀರ....







Thursday, 22 November 2012

ಗೋವಾದಲ್ಲಿ ಐದು ರಾತ್ರಿ...ಆರು ದಿನ ....ಭಾಗ 3


ಸ್ನೇಹಿತರೇ ...ಹಿಂದಿನ ಸಂಚಿಕೆಯಲ್ಲಿ ಅಪ್ಲೋಡ್ ಆಗದ  "ರಿವರ್ ಕ್ರೂಸ್ನ" ಇನ್ನೊಂದು ವಿಡಿಯೋ ನಿಮಗಾಗಿ...ಈ ಬಾರಿ ಪುನಃ ಕಷ್ಟ ಪಟ್ಟು  ಅಪ್ಲೋಡ್ ಆಗಿದೆ.....ಇದು ನನ್ನ ಇಷ್ಟದ ವಿಡಿಯೋ ಸಹಾ .... :))




ಮುಂದುವರಿದ ಪ್ರವಾಸ ಕಥೆ.....

ಮರುದಿನ ಅಂದರೆ ಅವತ್ತು ತಾರೀಕು ಅಕ್ಟೋಬರ್ 20...ಸ್ನೇಹಿತರ ಮನೆಯಲ್ಲಿ ಬೆಳಕಾಯ್ತು ...ಬಿಸಿಬಿಸಿ ಚಹಾ ಸೇವನೆಯ ನಂತರ ಸ್ನೇಹಿತರ   ಮಗನ ಶಾಲೆಯಲ್ಲಿ ಅವತ್ತು "ಓಪನ್ ಡೇ " ಇದ್ದದ್ದರಿಂದ ಅವರಿಗೆ ಶಾಲೆಗೆ ಹೋಗಬೇಕಿತ್ತು....ಬೇಗ ಬೇಗ ಸ್ನಾನ ಮುಗಿಸಿ ...ಸ್ನೇಹಿತೆ ತಯಾರಿಸಿದ ಚಿತ್ರಾನ್ನ ತಿಂದು...ನಾವು ರೆಡಿಯಾದ್ವಿ .. ಅವರು ಶಾಲೆಗೆ ಹೋಗಿ ಅಲ್ಲಿಯ ಕೆಲಸ ಮುಗಿಸಿ ಬಂದ ನಂತರ , ಅವರ ಮಗ ದಾಮೋದರ್ ಸಹಾ ನಮ್ಮ ಜೊತೆ ಆ ದಿನ ಪ್ರವಾಸಕ್ಕೆ ಹೊರಟಿದ್ದ .....

 ನಂತರ  ನಮ್ಮ ಅವತ್ತಿನ ಪ್ರಯಾಣ ಶುರು ಆಗಿದ್ದು 10 ಘಂಟೆಗೆ ...ನಿಸರ್ಗ ರಮಣೀಯವಾದ "ದೂದ್ ಸಾಗರ್ ಫಾಲ್ಸ್ಗೆ".... ಗೋವ ಟೂರಿಸಂನವರು ಫಾಲ್ಸ್ನ  ಪ್ಯಾಕೇಜನ್ನು ಇನ್ನು ಶುರು ಮಾಡದೆ ಇರುವುದರಿಂದ ನಾವು ಖಾಸಗಿ ಟ್ಯಾಕ್ಸಿ ಮಾಡಿ ಹೊರಟಿದ್ದೆವು...ಮಡಗಾಂವ್ನಿಂದ ಸುಮಾರು ಒಂದು ಘಂಟೆಯ ಪ್ರಯಾಣ... ನಮ್ಮ ಡ್ರೈವರ್ ಅಬ್ದುಲ್ಲ ದಾರಿಯಲ್ಲಿ ಸಿಗುವ ಯಾವುದೇ ವಿಶೇಷ ಸ್ಥಳಗಳ ಬಗ್ಗೆ ಒಳ್ಳೆಯ ಮಾಹಿತಿ ನೀಡುತ್ತ ಡ್ರೈವ್ ಮಾಡ್ತಿದ್ದರು ....ಆ ರಸ್ತೆ ಮಾತ್ರ ತುಂಬಾ ತಿರುವುಗಳು...ನಿಮಿಷಕ್ಕೊಂದು ತಿರುವು ....ನನಗಂತು ತಲೆ ಹೊಟ್ಟೆಯಲ್ಲಿ ತಿರುಗಿದ ರೀತಿ ಸಂಕಟ.....ಸಾಕಪ್ಪಾ ...ಸಾಕು ಈ ಪ್ರಯಾಣ ಅನ್ನಿಸ್ತಿತ್ತು ..

.ಕೊನೆಗೂ ನಮ್ಮ ಸ್ಥಳ ತಲುಪಿದಾಗ ಹನ್ನೊಂದು ಘಂಟೆ ಸಮಯ ....ನಮಗೆ ಅಲ್ಲಿಯ ಆಫೀಸಿನಲ್ಲಿ ಹಣ ಕಟ್ಟಿ ಅವರದ್ದೇ ವಾಹನದಲ್ಲಿ ಮುಂದಿನ ಪ್ರಯಾಣ....ನಮ್ಮ ಖಾಸಗಿ ವಾಹನಕ್ಕೆ ಒಳಗೆ ಅನುಮತಿಯಿಲ್ಲ ...ಅವರು ಸಧ್ರಢವಾಗಿರುವ ಜೀಪ್ನಲ್ಲಿ ಸುಮಾರು 8-9 ಜನರನ್ನು ಕೂರಿಸಿಕೊಂಡು ಪ್ರಯಾಣ ಶುರು ಮಾಡ್ತಾರೆ...ಪುನಃ ಸುಮಾರು ಮುಕ್ಕಾಲು ಘಂಟೆಯ ದಾರಿ .....ಆ ದಾರಿ ನೆನಪಿಸಿಕೊಂಡರೆ ಈಗಲೂ ಚಳಿ-ಜ್ವರ ಬರುತ್ತೆ....ಸುತ್ತಲು ಕಾಡು ...ಕೊರಕಲು ಹಾದಿ..ಕಲ್ಲು ಮಣ್ಣುಗಳ ಒರಟಾದ ರಸ್ತೆ..ಬೆನ್ನು, ಸೊಂಟದಲ್ಲಿ ಎಷ್ಟು ಮೂಳೆಗಳಿವೆ  ಎಂಬುದನ್ನು ಲೆಕ್ಕ ಹಾಕಬಹುದು...ಅಷ್ಟೊಂದು ಅಲುಗಾಟ ... ಇಡೀ ಮೈಯನ್ನು ನುಜ್ಜು ಗುಜ್ಜಾಗ್ಸಿ ಬಿಡುತ್ತದೆ ಆ ಪ್ರಯಾಣ...

ಆ  ಜೀಪ್ನಲ್ಲಿ ಕೂತು ಒಂದು ಫೋಟೋ ತೆಗಿಬೇಕಂದ್ರೆ ಹರಸಾಹಸ.... ಹತ್ತಾರು ಕ್ಲಿಕ್ಕ್ಗಳು ...ಎಲ್ಲವೂ ಬ್ಲರ್.... ಎಷ್ಟು ಕಷ್ಟ ಅಂದ್ರೆ, ನಾನು ಕೂತ ಸೀಟ್ನಿಂದ  ಕೆಳಗೆ ಬೀಳ್ತಿನೋ,  ಅಥವಾ ನನ್ನ ಕೈಯಲ್ಲಿದ್ದ ಕ್ಯಾಮರಾ ಬೀಳ್ತದೋ ಎಂಬ ಭಯ...ಅಷ್ಟೊಂದು ಜಂಪ್ ...ಜಂಪ್ ..... :)) 




ಹೀಗಿತ್ತು ಅಲ್ಲಿಯ ರಸ್ತೆ....




ಜೀಪಿನಲ್ಲಿ ಪಯಣಿಸುವಾಗ ದಾರಿ ಮಧ್ಯೆ ಕಂಡುಬಂದ ಹಕ್ಕಿಗಳ ಗುಂಪು...




ಮಧ್ಯ ಮಧ್ಯದಲ್ಲಿ ಸಿಗುವ ಸಣ್ಣ ತೊರೆಗಳು...ನಮ್ಮ ಜೀಪ್ ಅದನ್ನು ದಾಟಿಕೊಂಡು ಹೋಗಬೇಕು...ಕೆಲವೊಮ್ಮೆ ನೀರು ಜೀಪಿನ ಒಳಗೆ ನುಗ್ಗಿ ನಮ್ಮ ಕಾಲನ್ನು ತೊಯ್ಸಿತ್ತು ...ಅಷ್ಟೊಂದು ಆಳವಾಗಿತ್ತು ಆ ನೀರು  ....ಅಕಸ್ಮಾತ್ ಎಲ್ಲಾದರು ಮಣ್ಣಿನಲ್ಲಿ ಚಕ್ರಗಳು ಸಿಕ್ಕಿ ಹಾಕಿಕೊಂಡರೆ "ಗೋವಿಂದಾ".....




ಅಂತು ಇಂತು ನಮ್ಮ ತಾಣ ತಲುಪುವಾಗ ಹನ್ನೆರಡು ಘಂಟೆ...ಅಲ್ಲಿಂದ ಪುನಃ ನಡೆದುಕೊಂಡು ಜಲಪಾತ ತಲುಪಬೇಕಿತ್ತು ...ಸ್ವಲ್ಪ ಮೋಡದ ವಾತಾವರಣ ಇತ್ತು ಹಾಗಾಗಿ ಬಿಸಿಲಿನ ಗೊಡವೆ  ಇರಲಿಲ್ಲ ...ತಂಪಾದ ಹವೆ....ನಮಗೆ ಕೇವಲ ಒಂದು ಘಂಟೆಯ ಸಮಯ ಅಲ್ಲಿ ವೀಕ್ಷಿಸಲು ನಮ್ಮ ಡ್ರೈವರ್ ನಿಗಧಿ ಮಾಡಿದ್ದರು....

ಜೊತೆಗೆ ಇಬ್ಬರು ಮಕ್ಕಳು,  ಅವರಿಬ್ಬರ ಕೈ ಹಿಡಿದುಕೊಂಡು ನಡೆಯಬೇಕಿತ್ತು...ಸ್ವಲ್ಪ ಸ್ವಲ್ಪ ಜಾರುವ ಪಾಚಿಕಟ್ಟಿದ  ಬಂಡೆಕಲ್ಲುಗಳು ..ಮರಳಿನಲ್ಲಿ ಕಾಲಿಟ್ಟರು ಜಾರುವ ಪಾದ..

ಮಧ್ಯ ಮಧ್ಯ ಸಿಗುವ ಸಣ್ಣ ಸಣ್ಣ ಹಳ್ಳಗಳು  ...ತಂಪಾದ ನೀರು ...ಅದರಲ್ಲಿ ದಾಟುವಾಗ ಒಳ್ಳೆ ಐಸ್ ನೀರಲ್ಲಿ ನಡೆದ ಅನುಭವ...



ತಂಪು ತಂಪು ಹರಿವ ನೀರು.... ನಿಸರ್ಗದ ಚಂದ ಇಲ್ಲಿ ಬರ್ಪುರ್ ಕಾಣಬಹುದು.... 




ದಾರಿ ಮಧ್ಯೆ ಹೀಗಿತ್ತು ಕಲ್ಲು ಬಂಡೆಗಳ ರಾಶಿ...



ಸುಮಾರು 10-15 ನಿಮಿಷ ನಡೆದು ಹೋಗ್ತಾ ಇರಬೇಕಾದ್ರೆ, ನಮ್ಮ ಎದುರಿಗೆ ಕಾಣ ಸಿಕ್ಕಿದ್ದು ಈ ಸುಂದರ ಹಾಲಿನ ಹೊಳೆ...ಇದೇ .."ದೂದ್  ಸಾಗರ್ ಜಲಪಾತ"




ಪ್ರಕೃತಿಯ ಮಧ್ಯೆ ನಾವು...




ಇಲ್ಲಿ ಹೆಚ್ಚಾಗಿ ಕಾಣ ಸಿಗುವವರು ಸಹಾ ವಿದೇಶೀ ಪ್ರವಾಸಿಗರೇ.. ಗೋವಾದ  ಮುಖ್ಯ ಆಕರ್ಷಣೆ ಇವರಿಂದಲೇ ಎನ್ನಬಹುದು....







ಚಿತ್ರದ ಮಧ್ಯದಲ್ಲಿ ಕಾಣುತ್ತಿರುವುದು ರೈಲ್ವೆ ಮಾರ್ಗ....




ನಾವು ನಾಲ್ವರು....ಜೊತೆಜೊತೆಗೆ....




ನಾವು ಅಲ್ಲಿ ಇರುವಾಗಲೇ ಗೂಡ್ಸ್ ರೈಲೊಂದು ಪ್ರಯಾಣಿಸುವ ಮನೋಹರ ದೃಶ್ಯ ...





ಮಂಗಗಳಿಗಂತೂ ಪ್ರವಾಸಿಗರಿಂದ ಭೂರಿ ಭೋಜನ....




ಇದನ್ನೆಲ್ಲಾ ಕಣ್ಣು ತುಂಬಿಕೊಂಡು, ಸವಿದು ನಿಗಧಿತ  ಸಮಯಕ್ಕೆ ಹೊರಡಬೇಕಿತ್ತು....ನಮ್ಮ ಡ್ರೈವರ್ ನಮಗಾಗಿ ಕಾಯುತ್ತಿದ್ದ ..ಪುನಃ ಅದೇ ಕೊರಕಲು ರಸ್ತೆಯ ಪ್ರಯಾಣ....ನಮ್ಮ ಜೀಪಿನಿಂದ ಸ್ವಲ್ಪ ಹಿಂದೆ ಬರುತ್ತಿದ್ದ ಇನ್ನೊಂದು ಗಾಡಿ, ಅದು  ನೀರಿನೊಳಗೆ ಪ್ರಯಾಣಿಸುವಾಗ ಕ್ಲಿಕ್ಕ್ ಮಾಡಿದ್ದು....


ಅಂತು ಅವರ ಆಫೀಸಿನ ಹತ್ತಿರ ನಮ್ಮನಿಳಿಸುವಾಗ ಸುಮಾರು ಮಧ್ಯಾಹ್ನದ ಎರಡು   ಘಂಟೆ....ಊಟದ ಸಮಯವಾಗುತ್ತಿತ್ತು...ನಮ್ಮ ಡ್ರೈವರ್ ಅಬ್ದುಲ್ಲಾ ಊಟದ ಹೋಟೆಲ್ ತಲುಪಲಿಕ್ಕೆ ಇನ್ನು ಅರ್ಧ ಘಂಟೆ ಪ್ರಯಾಣ ಇದೆ ಅಂದ...ಅವನು ಇಳಿಸಿದ್ದು ಒಂದು "ಉಡುಪಿ ಹೋಟೆಲ್ನಲ್ಲಿ"....ಅಲ್ಲಿ ಊಟ ಮುಗಿಸಿ ನಮ್ಮ ಮುಂದಿನ ಪ್ರಯಾಣ ಹತ್ತಿರವೇ ಇದ್ದ ಇನ್ನೊಂದು ಬೀಚ್ ...ಅದರ ಹೆಸರು..."ಪೋಲೋಲಿಂ " (pololeum beach)...

ಇದು ನನ್ನ ಇಷ್ಟವಾದ ಆ ಕಿನಾರೆಯ ಒಂದು ಚಿತ್ರ .... :))




ಅಲ್ಲಿ ತಲುಪುವಾಗಲೇ ಸುಮಾರು ನಾಲ್ಕು ಘಂಟೆಯ ಸಮಯ ...ಅಲ್ಲಿ ಒಂದು ಕಡೆ ಸಮುದ್ರವಾದರೆ ಇನ್ನೊಂದು ಕಡೆ ಸಿಹಿನೀರಿನ ಕೆರೆ ಇದೆ....ಅಲ್ಲಿ ಸಹಾ ಸಣ್ಣ ದೋಣಿಗಳಲ್ಲಿ ಒಂದು ಸುತ್ತು ಹಾಕಿಸುತ್ತಾರೆ...ಸುತ್ತಲು ಚಂದದ ಪ್ರಕೃತಿ ...ಕೈಯಿಂದ ಹುಟ್ಟುಹಾಕುವ ದೋಣಿಯಲ್ಲಿ ನಮ್ಮ ಪ್ರಯಾಣ....ಸುಮಾರು ಮುಕ್ಕಾಲು ಘಂಟೆ ....ತುಂಬಾ ಬಿಸಿಲಿತ್ತು ಆ ಸಮಯದಲ್ಲಿ ...ನನಗೆ ಬಿಸಿಲೆಂದರೆ ಅಲರ್ಜಿ....ಆ ದೋಣಿ ಚಲಾಯಿಸುವವನು ಆ ಹಕ್ಕಿ , ಈ ಹಕ್ಕಿ , ಆ ಮರ,ಈ ಮರ ಎಂದು  ಅದರ ಹೆಸರನ್ನೆಲ್ಲಾ ವಿವರಿಸುತ್ತಾ ಇದ್ದರೆ ನನಗೆ ಸುಸ್ತು...ನಾವು ಮನೆಯಲ್ಲಿ ಕೊಂಕಣಿ ಮಾತಾಡುವುದಾದರು ಗೋವಾ ಕೊಂಕಣಿಯ ಶೈಲಿಯೇ  ಬೇರೆ.... ನನಗೆ ಅರ್ಧ ಅರ್ಥ ಆದರೆ ಇನ್ನರ್ಧ ಅರ್ಥ ಆಗುವುದಿಲ್ಲ ...ಅವನು ಹೇಳಿದ್ದಕ್ಕೆಲ್ಲ  ಸುಮ್ಮನೆ "ಹೂ ...ಹೂ ..." ಅಂತ ತಲೆ ಆಡಿಸ್ತಾ ಕೂತಿದ್ದೆ....ಮಕ್ಕಳಿಬ್ಬರು ಅವರ ಪ್ರಪಂಚದಲ್ಲಿ.....

ಹೀಗೆ ಸಾಗುವಾಗ ತೆಗೆದ ಕೆಲವು ಚಿತ್ರಗಳು....






ದೋಣಿಯಲ್ಲಿ ಪ್ರಯಾಣ ಮಾಡುತ್ತಿರುವ  ದೀಪ.... ದೇವದತ್ ... ;-)










ಅಲ್ಲೊಂದು ದೊಡ್ಡ ಬಂಡೆ ...ಅದರ ಮೇಲೊಂದು ಚಿಕ್ಕ ಉರುಟಾದ ಕಲ್ಲು...ಅದು ಹೇಗೆ ಬ್ಯಾಲೆನ್ಸ್ ಮಾಡುತ್ತಿತ್ತೋ ಗೊತ್ತಿಲ್ಲ...ಹೀಗಿರುತ್ತೆ ಕೆಲವೊಮ್ಮೆ ನಿಸರ್ಗದ ಅಂದ ಚಂದ ...





ಆಗ ತಾನೇ ಹಾರಲು ಹೋರಾಟ ಚಂದದ ಪಕ್ಷಿ 




ನಮ್ಮ ಬೋಟಿಂಗ್ ಆದ ನಂತರ ಪುನಃ ಸಮುದ್ರ ದಡಕ್ಕೆ ಬಂದಾಗ ಅಲ್ಲಿಯ ವಾತಾವರಣ ಹೀಗಿತ್ತು...ಸಂಜೆ ಐದರ ಸಮಯ....



ದಾಮೋದರ್ ತೆಗೆದ ನಮ್ಮ ಚಿತ್ರ...:))



ಮಕ್ಕಳಿಗೆ ಸಮುದ್ರ ಸ್ನಾನ ಮಾಡಬೇಕೆಂಬ ಆಸೆಯಿದ್ದುದ್ದರಿಂದ  ಮನೆಯಿಂದ ಹೊರಡುವಾಗಲೇ ಎರಡು ಜೊತೆ ಬಟ್ಟೆ , ಟವೆಲ್ ಎಲ್ಲಾ ತೆಗೊ0ಡು  ಬಂದಿದ್ದೆವು... ನನ್ನ ಯಜಮಾನರು ಮಕ್ಕಳನ್ನು ಕರೆದುಕೊಂಡು ನೀರಿಗೆ ಇಳಿದರೆ ...ನಾನು ಅವರ ಬಟ್ಟೆ , ಬ್ಯಾಗ್ ಕಾದುಕೊಂಡು ದಡದಲ್ಲಿ ಇದ್ದ ಒಂದು ಬೋಟ್ ಹತ್ತಿ ಕೂತಿದ್ದೆ....

ಸೂರ್ಯಾಸ್ತದ ಸಮಯ ... ಹೀಗಿತ್ತು ಗೋವಾದಲ್ಲಿ..... 



 ಈ ಚಿತ್ರದ ಜೊತೆ ಸುಂದರ ನೆನಪಿದೆ...ಅದೆಂದರೆ .....ನಾನು ಗೋವಾಕ್ಕೆ ಹೋದಾಗಿನಿಂದಲೂ ನನ್ನ ಮೊಬೈಲ್ನಲ್ಲಿ "ಫೇಸ್ ಬುಕ್ " ನೋಡಿರಲಿಲ್ಲ....ಕೆಲವೆಡೆ ನೆಟ್ವರ್ಕ್ ಇದ್ದರೆ ಇನ್ನು ಕೆಲವೆಡೆ ಇಲ್ಲ...ನೆಟ್ವರ್ಕ್ ಸಿಗುವಾಗ ನೋಡೋಕ್ಕೆ ಸಮಯವಿರಲಿಲ್ಲ ... ನಮ್ಮ ರೆಸಾರ್ಟ್ನಲ್ಲoತು bsnl network ಇಲ್ಲವೇ ಇಲ್ಲ....ಹಾಗೆ ಸುಮ್ಮನೆ ಕೂತ ನನಗೆ ...ನೆನಪಾಗಿದ್ದು ಫೇಸ್ ಬುಕ್ .... ಸಿಗ್ನಲ್ ಸಿಕ್ತು...ಓಪನ್ ಮಾಡ್ದೆ...ಆಗ ಕಂಡಿದ್ದು ಒಬ್ಬ ಸ್ನೇಹಿತರ "ಹಾಡಿನ ಲಿಂಕ್ "... ಅದು ಕನ್ನಡದ ಇತ್ತೀಚಿನ ಚಿತ್ರದ ಒಂದು ರೋಮ್ಯಾಂಟಿಕ್ ಹಾಡು ..ಆ ಹಾಡಿನಲ್ಲಿ ನನಗೆ ತುಂಬಾ ಇಷ್ಟವಾದ ಸಂಗೀತ ಮತ್ತು ಸಾಹಿತ್ಯ ಸಹಾ....

 ಅದನ್ನು ನೋಡಿ ಅಲ್ಲಿ ಕಾಮೆಂಟ್ ಮಾಡದೇ ....ನನ್ನ ಹತ್ತಿರ ಅವರ ಫೋನ್ ನಂಬರ್ ಇತ್ತು...ಅವರಿಗೊಂದು sms ಕಳಿಸ್ದೆ... " ಹೇ ..ಈ ಹಾಡು ,ಸಾಹಿತ್ಯ ಎಲ್ಲಾ ನಂಗೂ ತುಂಬಾ ಇಷ್ಟ..." ಅಂತ.... ಅದಕ್ಕೆ ಅವರ ಮರು sms ಹೀಗಿತ್ತು...." ಆ ಹಾಡನ್ನು ನನ್ನ ಧ್ವನಿಯಲ್ಲಿ ಕೇಳಬೇಕoದರೆ ನoಗೆ ಫೋನ್ ಮಾಡು...."  ಅಂತ ...ಅವರಂತೂ ನನ್ನ ಫ್ರೆಂಡ್ಗಳಲ್ಲಿ  ತುಂಬಾ ತುಂಬಾ ಕಂಜೂಸ್ ಅಂತಾನೆ ಹೇಳ್ಬಹುದು... :)) ನನ್ನ ಗ್ರಹಚಾರ ..... ಇವರನ್ನು    ಹೇಗೂ ರಿಪೇರಿ ಮಾಡಕ್ಕೆ ಆಗಲ್ಲ ... ಇರಲಿ  ಅಂತ  .ನಾನೇ ಫೋನ್ ಮಾಡ್ದೆ....ಅವರ ಹತ್ತಿರ ಮಾತಾಡದೆ ತುಂಬಾ ದಿನ ಸಹಾ ಆಗಿತ್ತು ....ಅದು ಸಹಾ STD ... :)) 15-20 ನಿಮಿಷ ಮಾತು ಮುಗಿದ ಮೇಲೆ ಆ ಹಾಡನ್ನು ಹಾಡಿದ್ರು ..." ಪರವಾಗಿಲ್ಲ ಸುಮಾರಾಗಿತ್ತು...".ಆದರು ಸಹಾ ..."ತುಂಬಾ ಚೆನ್ನಾಗಿದೆ" ಅಂತ ಸ್ವಲ್ಪ ಹೊಗಳ್ದೆ ... :)) ಪಾಪ ನಿಜ ಅಂತ ನಂಬಿದ್ರೋ ಗೊತ್ತಿಲ್ಲ.. :p ಅಕಸ್ಮಾತ್ ಇದನ್ನ ಓದಿದರೆ ಅಷ್ಟೇ.... ನನ್ನ ಕಥೆ ಮುಗೀತು... :))  ಹೀಗೆ ಒಂದೊಂದು ಚಿತ್ರದ ಹಿಂದೆ ಸಣ್ಣ ಸಣ್ಣ ನೆನಪುಗಳು ಇರುತ್ತೆ... ಪ್ರತಿ ಸಾರಿ ಈ ಚಿತ್ರ ನೋಡಿದಾಗ ಆ ಕ್ಷಣದ ನೆನಪಾಗುತ್ತೆ.... :))

ನಮ್ಮ ಮಾತು, ಹಾಡು ಮುಗಿವಾಗ ನೀರಿನಲ್ಲಿ ಆಟ ,ಸ್ನಾನ ಮುಗಿಸಿ ಮಕ್ಕಳು ವಾಪಾಸ್ ಬಂದರು...ಡ್ರೆಸ್ ಎಲ್ಲ ಬದಲಿಸಿ ಅಲ್ಲಿಂದ ಹೊರಡುವಾಗ ಆರು ಘಂಟೆ...ಅಲ್ಲಿಂದ ಒಂದು ಘಂಟೆ ಪ್ರಯಾಣ ಮಡಗಾಂವ್  ಸ್ನೇಹಿತರ ಮನೆಗೆ....

ಮನೆ ತಲುಪಿ ಮಕ್ಕಳು ಸ್ನಾನ ಮುಗ್ಸಿದ್ದ ಮೇಲೆ ಆಟ ಶುರುಮಾಡಿದ್ರು ...ನಾನು ನನ್ನ ಸ್ನೇಹಿತೆ ಜೊತೆ ಹರಟೆ...ನನ್ನ ಗಂಡ ಸ್ನೇಹಿತರ ಅಂಗಡಿಗೆ...ದಾಮೋದರ್ಗೆ  ಅವತ್ತು "A+ ಗ್ರೇಡ್ " ಬಂದಿದ್ದರಿಂದ ತಂದೆಗೆ ಮನೆಗೆ ಹೋದ ಕೂಡಲೇ ಫೋನ್ ಮಾಡಿ "ಪಿಜ್ಹಾ ಪಾರ್ಟಿ " ಅರೇ0ಜ್ ಮಾಡಿದ್ದ...ರಾತ್ರಿ ಊಟದ ಚಿಂತೆ ಇರಲಿಲ್ಲ....ಸ್ನೇಹಿತೆ ಮರುದಿನದ ತಿಂಡಿಗೆ ದೋಸೆ ಹಿಟ್ಟನ್ನು ಮಾತಾಡ್ತಾ ಮಾತಾಡ್ತಾ ರೆಡಿ ಮಾಡಿದ್ರು...9 ಘಂಟೆ ಸಮಯದಲ್ಲಿ ಅಂಗಡಿ ಹುಡುಗ ಪಿಜ್ಹಾ ಮತ್ತು ಕೋಕಾ ಕೋಲಾ ಕೊಟ್ಟು ಹೋದ...ನಾವು ನಾಲ್ವರು ಚೆನ್ನಾಗಿ  ತಿಂದು, ಕುಡಿದು ಮುಗಸಿದ್ವಿ ... :)) 

ಸ್ವಲ್ಪ ಸಮಯ ಬಿಟ್ಟು ಸ್ನೇಹಿತರು, ಗಂಡ ಎಲ್ಲ ಮನೆಗೆ ಬಂದ್ರು ....ಎಲ್ಲಾ ಮುಗಿವಾಗ ಸುಮಾರು 12 ಘಂಟೆ ಸಮಯ ...ಅಲ್ಲಿಗೆ ಅವತ್ತಿನ ದಿನಾ ಮುಗಿದಿತ್ತು...ಚಂದದ ನಿದ್ದೆ...ಸುಂದರ ಕನಸುಗಳು ... 

ಮರುದಿನ ಅಕ್ಟೋಬರ್ 21....  ಗೋವಾದಲ್ಲಿ ನಮ್ಮ ಕೊನೆಯ ದಿನ...ಉಡುಪಿಗೆ  ಮಧ್ಯಾಹ್ನದ ರೈಲ್ವೆ ಟಿಕೆಟ್ ಬುಕ್ ಆಗಿತ್ತು....ಅವತ್ತು ಭಾನುವಾರ...ಎಲ್ಲರು ಎದ್ದದ್ದು ಸ್ವಲ್ಪ ನಿಧಾನವಾಗಿ... ಬೆಳಗಿನ ಚಹಾ ಕುಡಿದು ಅದು ಇದು ಮಾತಾಡ್ತಾ ತಿಂಡಿಯ ಸಮಯ...ಬಿಸಿ ಬಿಸಿ ದೋಸೆ-ಚಟ್ನಿ.... :) 

ಹತ್ತು  ಘಂಟೆಗೆ ಎಳನೀರಿನ  ಸಮಾರಾಧನೆ.... ಮಕ್ಕಳಿಗೆ ಚೋಕೊಲೋವಾ ಕೇಕ್ ...ನಂತರ ಸ್ವಲ್ಪ ಸುತ್ತಾಡಿ ಹೊರಟಿದ್ದು   ಒಂದು ಅಧ್ಭುತ ರೆಸ್ಟೋರಂಟ್ ನಲ್ಲಿ ಲಂಚ್ಗೆ ..ಆಗ ಸುಮಾರು 12 ಘಂಟೆ ಸಮಯ.... 

ನಮಗೆ ಎರಡು ದಿನ ಸತ್ಕಾರ ಮಾಡಿದ ಸ್ನೇಹಿತರ ಕುಟುಂಬ...ರೆಸ್ಟೋರಂಟ್ನಲ್ಲಿ ... 




ನಾರ್ಥ್ ಇಂಡಿಯಾ ತಿಂಡಿ  ಮುಗಿಸಿ ಆಗಲೇ ಪ್ಯಾಕಿಂಗ್ ಮಾಡಿ ಇಟ್ಟಿದ್ದ ಲಗೇಜ್  ತಂದು ....ಸ್ನೇಹಿತರಿಗೆ "ಬಾಯ್" ಹೇಳಿ ಸ್ಟೇಷನ್ಗೆ ಬರುವಾಗ ಆಗಲೇ ನಮ್ಮ ರೈಲು ಸಿದ್ಧವಾಗಿ ನಿಂತಿತ್ತು.... ಮಧ್ಯಾಹ್ನ ಎರಡಕ್ಕೆ ಪ್ರಯಾಣ ಶುರು...

ಚಂದದ ಗೋವಾಕ್ಕೆ ವಿದಾಯ ಹೇಳುತ್ತಾ...ಹಲವು ನೆನಪುಗಳ ಜೊತೆ ಪ್ರಯಾಣ ಮರಳಿ ನಮ್ಮ ಗೂಡಿಗೆ....

ಆರು ದಿನಗಳು ...ಆರು ನಿಮಿಷಗಳಂತೆ ಕಳೆದು ಹೋಗಿತ್ತು..... 

ಪ್ರಯಾಣ ಮಧ್ಯೆ ಚಹಾ, ಬಿಸ್ಕಿಟ್ ತಿಂತಾ ಸಮಯ ಕಳೆಯುತ್ತಿತ್ತು ....ಸಂಜೆ ಕವಿದು ಕತ್ತಲಾಗುವ ಸಮಯ....ಊರು ಹತ್ತಿರ ಹತ್ತಿರ ಬರುತ್ತಿದ್ದಂತೆ ......ನೀಲಂ ಚಂಡಮಾರುತದ ಅಡ್ಡ ಪರಿಣಾಮ ಶುರುವಾಗಿತ್ತು....ಭಟ್ಕಳ, ಕುಮಟ , ಕುಂದಾಪುರ ದಾಟುವಾಗ ಜೋರು ಮಳೆ.... ಚಳಿಗಾಳಿ.... 

ದೂರದಿಂದ ಮಣಿಪಾಲದ ಲೈಟ್ ಕಾಣುತ್ತಿತ್ತು ... ನಮ್ಮ ಇಂದ್ರಾಳಿ ನಿಲ್ದಾಣ ಹತ್ತಿರ ಬರುತ್ತಿತ್ತು...ಪುನಃ ಲಗೇಜ್ ತೆಗೆದು ಇಳಿಯಬೇಕಿತ್ತು ...ರೈಲು ನಂತರ ಮಂಗಳೂರಿನೆಡೆಗೆ ಪಯಣಿಸಲಿಕ್ಕಿತ್ತು .... ನಮ್ಮ ಸ್ಟೇಷನ್ನಲ್ಲಿ ಸ್ವಲ್ಪ ಸಮಯ ಮಾತ್ರ ನಿಲುಗಡೆ....ಆ ಮಳೆಯಲ್ಲಿ ಲಗೇಜ್ ಎತ್ತಿಕೊಂಡು ಇಳಿವಾಗ ಸಾಕೋ ಸಾಕು.... ಭಾನುವಾರ ಆದ್ದರಿಂದ ರಿಕ್ಷಾಗಳು ಸಾಕಷ್ಟಿರಲಿಲ್ಲ..ಕೊನೆಗೆ ಒಬ್ಬ ಗುರುತಿನ ಡ್ರೈವರ್ಗೆ ಫೋನ್ ಮಾಡಿ ಆಟೋ ಹತ್ತಿ ಮನೆಗೆ ತಲುಪುವಾಗ ರಾತ್ರಿ 8.30.... ಹೊರಗೆ ಮಿ0ಚುತಿತ್ತು ...ಸಣ್ಣಗೆ ಜಿಟಿಜಿಟಿ ಮಳೆ....

ಮನೆ ತಲುಪಿ ಕೈ ಕಾಲು ತೊಳೆದು .... ಆಗಲೇ ಅತ್ತೆ ಮಾಡಿಟ್ಟ ಊಟ ಮಾಡಿ ಮಲಗಿದ್ದಷ್ಟೇ ..... ಪ್ರಯಾಣದ ಆಯಾಸಕ್ಕೆ ಒಳ್ಳೆಯ ನಿದ್ರೆ.... :))

ಹೀಗೆ  ನಮ್ಮ ಗೋವಾದಲ್ಲಿ ಐದು ರಾತ್ರಿ...ಆರು ದಿನ ಮುಗಿದಿತ್ತು.... :))

ಪ್ರೀತಿಯ ಸ್ನೇಹಿತರೆ ನನ್ನ ಜೊತೆ ಗೋವಾದ ಪ್ರಯಾಣ ಮಾಡಿದ ನಿಮಗೆಲ್ಲರಿಗೂ ವಂದನೆಗಳು.... :))

ಪ್ರೀತಿಯಿಂದ 

ಸುದೀಪ .....