Saturday 29 September 2012

ಕಲ್ಲುಹೃದಯ...


ನನ್ನ ಮಗ ಅಶ್ವಿನ್ ಹುಟ್ಟಿದ್ದು ತೀರ್ಥಹಳ್ಳಿಯ ಮಾನಸ ನರ್ಸಿಂಗ್ ಹೋಮ್ ಆಸ್ಪತ್ರೆಯಲ್ಲಿ. ಅವತ್ತು ತಾರೀಕು ೨೦ ಜನವರಿ ೨೦೦೩. ಸ್ವಲ್ಪ ಸಮಸ್ಯೆ ಇದ್ದದ್ದರಿಂದ ಸಹಜ ಹೆರಿಗೆಯಾಗದೆ ನನಗೆ ಶಸ್ತ್ರಕ್ರಿಯೆಯ ಮೂಲಕ ಮಗುವನ್ನು ಹೊರತೆಗೆಯಲಾಗಿತ್ತು. ಹೆರಿಗೆ ಆಗಿ ಎರಡು ದಿನ ನಂತರ ನನಗೆ ಬಿಟ್ಟು ಬಿಟ್ಟು ಜ್ವರ ಬರುತ್ತಿತ್ತು.  ರಕ್ತಪರೀಕ್ಷೆ ಮಾಡಿದಾಗ ಮೂತ್ರ ಸೋಂಕಿನಿಂದ ಎಂದು ತಿಳಿದು ಬಂತು...ಅದಕ್ಕೆ ಲೀಟರ್ಗಟ್ಟಲೆ ನೀರು ಕುಡಿಯಬೇಕಿತ್ತು...ನನ್ನ ತಂದೆ ಪಾಪ...ತಮ್ಮ ಅಂಗಡಿ ಬಾಗಿಲು ಹಾಕಿದ ನಂತರ ನನ್ನನ್ನು ಒಮ್ಮೆ ಆಸ್ಪತ್ರೆಗೆ ಬಂದು ಮಾತನಾಡಿಸಿ, ಅಲ್ಲೇ ಇದ್ದ ಆಸ್ಪತ್ರೆಯ ಕ್ಯಾಂಟೀನ್ನಲ್ಲಿ ಅಪ್ಪ-ಅಮ್ಮ ಇಬ್ಬರೂ ಊಟ ಮಾಡಿ, ಮನೆಗೆ ಹೋಗುವಾಗ ಒಗೆಯುವ ಬಟ್ಟೆಗಳನ್ನು ಸಹಾ ತೆಗೆದುಕೊಂಡು ಹೋಗುತ್ತಿದ್ದರು..ಮತ್ತೆ ಮನೆಗೆ ಹೋಗಿ ದೊಡ್ಡ ದೊಡ್ಡ ಪಾತ್ರೆಯಲ್ಲಿ ನೀರು ಕಾಯಿಸಿ, ಅದನ್ನು ತಣ್ಣಗೆ ಮಾಡಿ, ಮಾರನೇ ದಿನ ಬೆಳಿಗ್ಗೆ ಆಸ್ಪತ್ರೆಗೆ ಬರುವಾಗ ಬಾಟಲಿಯಲ್ಲಿ ತುಂಬಿಕೊಂಡು ಬರುತ್ತಿದ್ದರು...ಹೀಗೆ ಮಗುವಿಗೂ ಹುಟ್ಟಿದ ಎರಡು ಮೂರು ದಿನ ಮೈ ಸ್ವಲ್ಪ ಹಳದಿ ಬಣ್ಣ ಇದ್ದುದರಿಂದ, ಆಸ್ಪತ್ರೆಯಲ್ಲೇ ನಾವು ಚಿಕಿತ್ಸೆಗಾಗಿ ನಿಲ್ಲಬೇಕಾಯ್ತು. ಏಳನೇ ದಿನ ಹೇಗೂ ನನಗೆ ಸಿಸೆರಿಯನ್ ಶಸ್ತ್ರಕ್ರಿಯೆಯ ಹೊಲಿಗೆ ಬಿಚ್ಚಬೇಕಾದ್ದರಿಂದ..ಅಷ್ಟೂ ದಿನ ಆಸ್ಪತ್ರೆಯಲ್ಲಿ ಝಂಡಾ ಹೂಡಿದ್ದೆವು...ಆಗ ಅಲ್ಲಿ ನಡೆದ ಎಷ್ಟೋ ಘಟನೆಗಳು ಇನ್ನೂ ನನ್ನ ಮನಸ್ಸಿನಲ್ಲಿ ಹಾಗೇ ಉಳಿದಿದೆ..ತುಂಬಾ ಕಾಡುವ ನೆನಪೆಂದರೆ....ಈ ಕೆಳಗಿನ ಘಟನೆ...



ಅವತ್ತು ೨೧ ಜನವರಿ, ನನ್ನ ಹೆರಿಗೆಯಾದ ಮಾರನೇ ದಿನ. ಸಂಜೆ ದೀಪ ಹಚ್ಚುವ ಸಮಯ. ಬಹುಷಃ ೭ ಘಂಟೆ ಸಮಯ. ಆಸ್ಪತ್ರೆಯಿಡೀ ಗದ್ದಲ. ಸಂಬಂಧಿಕರನ್ನು, ರೋಗಿಗಳನ್ನು ಹೀಗೆ ಪರಿಚಯದವರನ್ನು ಮಾತನಾಡಿಸಲಿಕ್ಕೆ ಜನಗಳು ಬರುತ್ತಿದ್ದರು. ಕಾರಿಡಾರ್ನಲ್ಲಿ ಎಲ್ಲರೂ ಅತ್ತಿಂದಿತ್ತ ಓಡಾಡುವವರೆ. ನನ್ನ ಪಕ್ಕದ ಮಂಚದಲ್ಲಿ ಒಬ್ಬ ಹುಡುಗಿ ಸಹಾ ಗಂಡು ಮಗುವನ್ನು ಹೆತ್ತಿದ್ದಳು. ಅವಳನ್ನು ನೋಡಿಕೊಳ್ಳಲು ಅವಳ ಹತ್ತಿರ ಆಕೆಯ ಅಕ್ಕ ಇದ್ದರು. ಸ್ವಲ್ಪ ಮಧ್ಯ ವಯಸ್ಸಿನ ಹೆಂಗಸಾಕೆ. ಪಾಪದ ಸ್ವಭಾವ. ಈ ಹೊರಗಿನ ಗದ್ದಲದಲ್ಲಿ ಯಾರೋ ಒಬ್ಬ ಹೊಸ ಹೆಂಗಸು ಆಕೆಯ ಹತ್ತಿರ ಬಂದು..."ಅಕ್ಕಾ..ಈ ಮಗುವನ್ನು ಸ್ವಲ್ಪ ನೋಡಿಕೊಳ್ಳಿ..ನನ್ನ ಸೊಸೆ ಇನ್ನೊಂದು ರೂಮಿನಲ್ಲಿ ಇದ್ದಾಳೆ. ವೈದ್ಯರು ಹೊಸ ಔಷಧಿ ಬರೆದು ಕೊಟ್ಟಿದ್ದಾರೆ. ಕೆಳಗಿನ ಮೆಡಿಕಲ್ ಶಾಪ್ನಲ್ಲಿ ಸಿಗುತ್ತಿಲ್ಲ. ನಾನು ಇನ್ನೊಂದು ಅಂಗಡಿಯಲ್ಲಿ ವಿಚಾರಿಸಿ ಬೇಗ ತಂದು ಬಿಡುತ್ತೇನೆ..." ಎಂದು ಆಕೆ ಒಪ್ಪದಿದ್ದರೂ, ಆಕೆಯನ್ನು ಪುಸಲಾಯಿಸಿ, ಮಗುವನ್ನು ಆಕೆಯ ಕೈಗಿಟ್ಟು ಹೊರಡುತ್ತಾಳೆ. ಇಷ್ಟೆಲ್ಲಾ ಆದರೂ ಈ ವಿಷಯ ಯಾರ ಗಮನಕ್ಕೂ ಬರುವುದಿಲ್ಲ. ಯಾರೋ ಪರಿಚಯದ ಹೆಂಗಸಿರಬೇಕು...ಈಕೆ ಮಾತನಾಡುತ್ತಿದ್ದಾಳೆ ಎಂದು ಎಲ್ಲರೂ ಎಣಿಸುತ್ತಾರೆ...ಐದು ನಿಮಿಷ ಆಯ್ತು...ಹತ್ತು ನಿಮಿಷ ಆಯ್ತು...ಕೊನೆಗೆ ಕಾಲು ಘಂಟೆ ಆದರೂ ಆ ಹೆಂಗಸಿನ ಸುಳಿವೇ ಇಲ್ಲ...ಈಗ ಇವರಿಗೆ ನಿಜಕ್ಕೂ ಗಾಬರಿ ಶುರುವಾಗ್ತದೆ..ಮಂಚದ ಮೇಲೆ ಮಲಗಿಸಿದ ಮುದ್ದಾದ ಹೆಣ್ಣು ಮಗು. ತಲೆಗೆ ಟೊಪ್ಪಿ, ಕಾಲಿಗೆ ಸಾಕ್ಸ್, ಚಂದದ ಅಂಗಿ, ಬಣ್ಣದ ಬಟ್ಟೆಯಲ್ಲಿ ಸುತ್ತಿದ..ಹತ್ತು ದಿನಗಳ ಒಳಗಿನ ಮಗು.. ಯಾವ ಯೋಚನೆಯಿಲ್ಲದೆ...ಮುದ್ದಾಗಿ ಮಲಗಿತ್ತು..ನಿಧಾನಕ್ಕೆ ಒಬ್ಬರಿಂದ ಒಬ್ಬರಿಗೆ ಈ ವಿಷಯ ತಿಳಿದು, ಎಲ್ಲರೂ ಆ ಮಗುವನ್ನು ನೋಡಲು ಹಿಂಡು ಹಿಂಡು ಬರಲಿಕ್ಕೆ ಶುರು ಮಾಡಿದ್ದರು. "ಅಯ್ಯೋ..ಎಷ್ಟು ಮುದ್ದಾಗಿದೆ ಮಗು..ಯಾವ ಪಾಪಿಗಳೊ..ಬಿಟ್ಟು ಹೋಗಿದ್ದಾರೆ.." ಎಂದು ಒಬ್ಬರೆಂದರೆ, ಇನ್ನೊಬ್ಬರು..."ಯಾವ ಕರ್ಮ ಮಾರಾಯ್ರೆ...ಹೇಸಿಗೆ ಇಲ್ಲದ ಜನ..." ಅಂತ ತಲೆಗೊಂದರಂತೆ ಮಾತಾಡ್ಲಿಕ್ಕೆ ಶುರು ಮಾಡಿದ್ದರು...ವಿಷಯ ತಿಳಿದ ಆಸ್ಪತ್ರೆ ಸಿಬ್ಬಂದಿ ಆ ಹೆಂಗಸಿನ ಸೀರೆಯ ಗುರುತು ತಿಳಿದುಕೊಂಡು ಆಸ್ಪತ್ರೆಯಿಡೀ ಜಾಲಾಡಿದರೂ ಫಲಿತಾಂಶ ಮಾತ್ರ ಸೊನ್ನೆ...ಅವಳು ಮಗುವನ್ನು ಬಿಟ್ಟು ಎಲ್ಲೋ ಪರಾರಿಯಾಗಿದ್ದಳು.


ಚಿತ್ರಕೃಪೆ-ಅಂತರ್ಜಾಲ 



ನಂತರ ಒಂದೆರಡು ದಿನ ಆಸ್ಪತ್ರೆಯ ಸಿಬ್ಬಂದಿಯೇ..ಆ ಮಗುವಿನ ಲಾಲನೆ-ಪೋಷಣೆ ಮಾಡಿದ್ದರು...ವಿಷಯ ತಿಳಿದ ಯಾರೋ ಸಹೃದಯಿಗಳು, ಮಕ್ಕಳಿಲ್ಲದವರು...ಕಾನೂನು ರೀತ್ಯ ಆ ಮಗುವನ್ನು ದತ್ತು ತೆಗೆದುಕೊಂಡರು. ಈ ನೆನಪು ಈಗಲೂ ನನ್ನನ್ನು ಕಾಡುತ್ತಿರುತ್ತದೆ.


ಈ ಜಗತ್ತಿನಲ್ಲಿ ಎಷ್ಟೊಂದು ಕಲ್ಲುಹೃದಯದ ಜನರಿರ್ತಾರೆ ಎಂದು ಕಣ್ಣಾರೆ ಕಂಡ ದಿನವದು. ಆ ತಾಯಿಗೆ ಅದೇನು ಸಮಸ್ಯೆಯೋ...ಹೆಣ್ಣು ಮಗುವೆಂಬ ತಾತ್ಸಾರವೋ, ಹಣದ ಸಮಸ್ಯೆಯೋ ಅಥವಾ ವ್ಯಭಿಚಾರಕ್ಕೆ ಬಲಿಯಾಗಿ ಹುಟ್ಟಿದ ಕೂಸೋ ಗೊತ್ತಿಲ್ಲ. ನಾನು ಯಾವಾಗಲೂ ವೃತ್ತಪತ್ರಿಕೆಯಲ್ಲಿ ಮಗುವನ್ನು ಕಸದ ತೊಟ್ಟಿಯಲ್ಲಿ ಎಸೆದು ಹೋಗುವ..ಸಮಾಚಾರವನ್ನು ಓದುತ್ತಾ ಇರುತ್ತಿದ್ದೆ..ಆದರೆ ನನ್ನ ಕಣ್ಣ ಮುಂದೆ ಹೀಗೊಂದು ದುರಂತ ನಡೆಯುತ್ತದೆ ಎಂದು ಯಾವತ್ತೂ ಎಣಿಸಿರಲಿಲ್ಲ... :(

ಆದರೂ ಒಂದು ಸಂತೋಷದ ವಿಷಯವೆಂದರೆ ಒಬ್ಬ ವ್ಯಕ್ತಿ ಮಗುವನ್ನು ತಿರಸ್ಕರಿಸಿದರೆ.... ನೂರು ವ್ಯಕ್ತಿಗಳು ಮರು ಜೀವನ ಕೊಡಲು ತಯಾರಿರುತ್ತಾರೆ.... :))



Friday 21 September 2012

ಸ್ನೇಹ....ಚಿರಂಜೀವಿ....


ನಾವು ನಮ್ಮ ಜೀವನದಲ್ಲಿ ತುಂಬಾ ತರಹದ ಆತ್ಮೀಯ ಸ್ನೇಹಿತರನ್ನು ನೋಡ್ತಾ ಇರ್ತೇವೆ... ತಮ್ಮ ಮಿತ್ರನಿಗಾಗಿ ಪ್ರಾಣಕ್ಕೆ...ಪ್ರಾಣ ಕೊಡುವವರು ಇರ್ತಾರೆ.. ಸ್ನೇಹಿತರಿಗೆ ಕಷ್ಟ ಬಂದರೆ ತಮ್ಮ ಆಸ್ತಿ-ಪಾಸ್ತಿ, ಐಶ್ವರ್ಯ ಎಲ್ಲವನ್ನೂ ತ್ಯಾಗ ಮಾಡುವವರು ಇರ್ತಾರೆ..ಇನ್ನು ಕೆಲವರಿಗಂತೂ ತಮ್ಮ ಹೆಂಡತಿ, ಮಕ್ಕಳಿಗಿಂತ ಸ್ನೇಹಿತರೆ..ಅಚ್ಚುಮೆಚ್ಚಾಗಿರ್ತಾರೆ..ಈಗೆಲ್ಲಾ ಸ್ನೇಹಿತರ ಹತ್ತಿರ ಹಣ ಇರುವ ತನಕ ಅವರ ಜೊತೆ ಮಜಾ ಮಾಡಿ..ನಂತರ ಅವರನ್ನು ಮರೆತು ಬಿಡುವ ಕಾಲ...


"ಸ್ನೇಹ" ಎಂದ ಕೂಡಲೆ ನನ್ನ ನೆನಪಿಗೆ ಬರುವುದು...ಸುಮಾರು ಹನ್ನೊಂದು ವರ್ಷಗಳ ಹಿಂದೆ ನಾನು ನೋಡಿದ ಇಬ್ಬರು ವ್ಯಕ್ತಿಗಳು..ನನಗೆ ಆಗಸ್ಟ್ ೩೧,೨೦೦೧ ರಲ್ಲಿ ಮದುವೆ..ಅದಾಗಿ ಒಂದು ತಿಂಗಳ ನಂತರ ನಾವು ಒಂದು ವಾರದ "ದಕ್ಷಿಣ ಭಾರತ" ಪ್ರವಾಸಕ್ಕೆಂದು ವಿಕ್ರಮ್ ಟ್ರಾವೆಲ್ಸ್ನಲ್ಲಿ ಟಿಕೆಟ್ ಬುಕ್ ಮಾಡಿದ್ದೆವು..ನಮ್ಮ ಪ್ರಯಾಣ ಮಂಗಳೂರಿನಿಂದ ಪ್ರಾರಂಭ...ಹಿಂದಿನ ದಿನವೇ ಹೋಟೆಲ್ನಲ್ಲಿ ರೂಮ್ ಮಾಡಿದ್ದೆವು..ಮರುದಿನ ಬೆಳಿಗ್ಗೆ ಅಲ್ಲಿಂದ ಮೈಸೂರಿಗೆ ನಮ್ಮ ಪ್ರಯಾಣ..ನಂತರ ಊಟಿ, ಕೊಡೈಕೆನಾಲ್, ಮೆಟ್ಟುಪಾಳ್ಯಂ, ತೆಕ್ಕಾಡಿ, ಕೊಚ್ಚಿನ್..ಹೀಗೆ ನಮ್ಮ ಊರುಗಳ ಪ್ರಯಾಣ ನಿಗದಿಯಾಗಿತ್ತು..


ಬಹುಷಃ ಮೈಸೂರಿನ ಹತ್ತಿರ ಇಬ್ಬರು ವ್ಯಕ್ತಿಗಳು ನಮ್ಮ ಸಹಪ್ರಯಾಣಿಕರಾಗಿ ಬಸ್ ಹತ್ತುತ್ತಾರೆ..ಒಬ್ಬರು ಎರಡೂ ಕೈಗಳಲ್ಲೂ ಊರುಗೋಲಿನ ಸಹಾಯದಿಂದ ನಿಧಾನವಾಗಿ ಬಸ್ನಲ್ಲಿ ಹತ್ತುತ್ತಾರೆ..ಅವರ ಸ್ನೇಹಿತರು ಲಗ್ಗೇಜ್ ಎಲ್ಲವನ್ನೂ ಹಿಡಿದುಕೊಂಡು..ಅವರಿಗೆ ಸಹಾಯ ಮಾಡುತ್ತಾ ಇರುತ್ತಾರೆ.. ನಾವೆಲ್ಲಾ ಆಗ ಅಂದುಕೊಳ್ತೇವೆ...ಇಷ್ಟು ಕಷ್ಟದಲ್ಲಿ ಇವರು ಅದು ಹೇಗೆ ಒಂದು ವಾರ ಪ್ರಯಾಣ ಮಾಡುತ್ತಾರೆ..? ಎಂದು...ಹೀಗೆ ಎಲ್ಲಾ ಕಡೆಯೂ ತುಂಬಾ ನಡೆಯಲಿಕ್ಕೆ ಇದ್ದರೆ ಅವರು ಬಸ್ನಲ್ಲಿಯೆ ಕುಳಿತಿರುತ್ತಿದ್ದರು..ಅಥವಾ ಸ್ವಲ್ಪ ದೂರ ನಿಧಾನಕ್ಕೆ ನಡೆದು ಬರುತ್ತಿದ್ದರು...ಬಹುಷಃ ಅವರಿಗೆ ತುಂಬಾ ಬೆನ್ನು ನೋವು ಮತ್ತು ಕಾಲು ನೋವು ಬರುತ್ತಿತ್ತು..ಎಲ್ಲಾ ಸಮಯದಲ್ಲೂ ಅವರ ಸ್ನೇಹಿತರು ಅವರಿಗೆ ಸಹಾಯ ಮಾಡುತ್ತಿದ್ದರು..ತುಂಬಾ ಕಡಿಮೆ ಮಾತಾಡುತ್ತಿದ್ದರು..

ಊರುಗೋಲು ಹಿಡಿದುಕೊಂಡು ನಡೆಯುವವರು ನಮ್ಮ ಭಾರತ ದೇಶದ ಸೇನೆಗಾಗಿ ದುಡಿದ "ಒಬ್ಬ ವೀರ ಯೋಧ..." ಸುಮಾರು ಒಂದೆರಡು ವರ್ಷಗಳ ಹಿಂದೆ ನಡೆದ "ಕಾರ್ಗಿಲ್" ಯುದ್ಧದಲ್ಲಿ ಅವರ ಕಾಲುಗಳಿಗೆ ತುಂಬಾ ಏಟಾಗಿ, ಪೆಟ್ಟಾಗಿ ಎಷ್ಟೋ ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು..ಪುನಃ ಮನೆಗೆ ಬಂದು ಸುಮಾರು ತಿಂಗಳುಗಳ ಕಾಲ ವಿಶ್ರಾಂತಿ..ಸ್ವಲ್ಪ ಬದಲಾವಣೆ ಇರಲಿ ಎಂದು ಅವರ ಸ್ನೇಹಿತರು ಅವರನ್ನು ಈ ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದರು.. ಪುನಃ ಆರೋಗ್ಯ ಸಮಸ್ಯೆ ಇದ್ದುದ್ದರಿಂದ ಅವರನ್ನು ಸೇನೆಗೆ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ..ಅವರು ಆಸ್ಪತ್ರೆಯಲ್ಲಿ ಇದ್ದಾಗ ಕೆಲವು ರಾಜಕೀಯ ಪುಢಾರಿಗಳು ಕೆಲಸ ಕೊಡಿಸುತ್ತೇವೆಂದು ಭರವಸೆ ನೀಡಿ ನಂತರ ತಿರುಗಿಯೂ ನೋಡುತ್ತಿರಲಿಲ್ಲವಂತೆ..ನಮ್ಮ ಪ್ರಯಾಣದ ಸಮಯದಲ್ಲಿ ಅವರು  ಬೇರೆಯ ಕೆಲಸ ಹುಡುಕುತ್ತಿದ್ದರು..ಅವರಿಗೆ ಬಹುಷಃ ಆಗ ಕೇವಲ ೨೫-೨೬ ವರ್ಷ ಅಷ್ಟೆ ಇರಬಹುದು..ಅವರು ನಮ್ಮ ಜೊತೆ ಯುದ್ಧದ ಅನುಭವ ಎಲ್ಲಾ ಹಂಚಿಕೊಳ್ಳುತ್ತಿದ್ದರು..ದಿನಗಟ್ಟಲೆ ಊಟ-ತಿಂಡಿಯಿಲ್ಲದೆ ...ಕೇವಲ ಚೊಕೊಲೇಟೋ..ಒಂದು ಬಿಸ್ಕಿಟ್ ಪ್ಯಾಕೆಟ್ನಲ್ಲಿ ಹೇಗೆ ದಿನಗಳು ಕಳೆಯುತ್ತಿದ್ದರು...ಪಾಕಿಸ್ತಾನದ ಸೈನಿಕರು ಸತ್ತ ಹಾಗೆ ಬಿದ್ದು..ಹತ್ತಿರ ಹೋಗಿ ಪರೀಕ್ಷೆ ಮಾಡುವಾಗ ಹೇಗೆ ಆಕ್ರಮಣ ಮಾಡುತ್ತಿದ್ದರೆಂದು...ಅವರಿಗೆ ಇದನ್ನೆಲ್ಲಾ ಹೇಳುವಾಗಲೇ ರೋಷ ಬರುತ್ತಿತ್ತು...ಅವರಲ್ಲಿ ಒಬ್ಬರ ಹೆಸರು.."ನವೀನ್" ಇರಬೇಕು...ಸರಿಯಾಗಿ ನೆನಪಿಲ್ಲ..ಹಾಳಾದ ಮರೆವು... :(



ನಮ್ಮ ಪ್ರಯಾಣದ ಕೊನೆಯ ದಿನ ಬಸ್ಸಿನ ಎಲ್ಲಾ ಪ್ರಯಾಣಿಕರು ಸೇರಿ ಅವರಿಗೊಂದು ಸಣ್ಣ ಕಾರ್ಯಕ್ರಮ ಹಮ್ಮಿಕೊಂಡು..ಒಂದು ಚಿಕ್ಕ ನೆನಪಿನ ಕಾಣಿಕೆಯನ್ನು ನೀಡಿದ್ದೆವು...




ಈಗ ಇಬ್ಬರೂ ಯಾವ ಊರಿನಲ್ಲಿದ್ದಾರೋ ಗೊತ್ತಿಲ್ಲ......????

ಆದರೂ ಈ ಚಿತ್ರ ನೋಡಿದಾಗೆಲ್ಲಾ ನಾವು ಅವರ ನೆನಪು ಮಾಡ್ತಾ ಇರ್ತೇವೆ... ಅವ್ರೆಲ್ಲೇ ಇರಲಿ....ಇಬ್ಬರು ಸ್ನೇಹಿತರಿಗೂ ಒಳ್ಳೆಯದಾಗಲಿ.. :-)


Saturday 15 September 2012

ಅಬ್ಬಾ..ಮರೆಯಲಾಗದ ಆತಂಕ...


ಬೆಳಿಗ್ಗೆ ೮.೩೦ ರ ಸಮಯ...ಅವತ್ತು ಮೇ.೩..೨೦೧೨.. ನಾನು ಮನೆಯಲ್ಲಿ ತಿಂಡಿ ತಿಂದು ಮುಗಿಸಿದ್ದೆನಷ್ಟೆ...ಯಜಮಾನರು ಆಫೀಸಿಗೆ ಹೊರಡಲು ತಯಾರಿ ನಡೆಸುತ್ತಿದ್ದರು. ಅಷ್ಟರಲ್ಲಿ ನನ್ನ ಯಜಮಾನರಿಗೆ ಅಮ್ಮನ ಫೋನ್..." ಆದಷ್ಟು ಬೇಗ ಆಸ್ಪತ್ರೆಗೆ ಬನ್ನಿ...ಇವರಿಗೆ ಸ್ವಲ್ಪ ಸೀರಿಯಸ್.." ಅದನ್ನು ಕೇಳಿದ್ದೆ..ತಡ..ಇದ್ದ ಕೆಲಸವನ್ನೆಲ್ಲಾ ಬದಿಗಿಟ್ಟು ಇಬ್ಬರೂ ಲಗುಬಗೆಯಿಂದ ಆಸ್ಪತ್ರೆಯೆಡೆ ಬೈಕಿನಲ್ಲಿ ದೌಡಾಯಿಸಿದೆವು...ಅಲ್ಲಿ ಮೂರನೆ ಮಹಡಿಯಲ್ಲಿ ಅಪ್ಪನ ವಾರ್ಡ್..ನಮ್ಮ ಗ್ರಹಚಾರಕ್ಕೆ ಆ ಸಮಯದಲ್ಲಿ ಬೆಳಿಗ್ಗೆಯೇ ಏನೋ ಸರ್ವಿಸಿಂಗ್ ಕೆಲಸ ನಡೆಯುತ್ತಿತ್ತು..ಸರಿ...ಹಾಗೆಯೇ ಇಬ್ಬರೂ ಏದುಸಿರು ಬಿಡುತ್ತಾ ಮಹಡಿ ಹತ್ತಿದೆವು...ನಾವು ಇನ್ನೇನು ಮೂರನೆ ಮಹಡಿಗೆ ಕಾಲಿಡುತ್ತಿದ್ದಂತೆ...ನಮ್ಮ ಎದುರಿಗೆ ಅಪ್ಪನನ್ನು "ತೀವ್ರನಿಘಾ ಕೊಠಡಿಗೆ" ಸ್ಥಳಾಂತರ ಮಾಡುತ್ತಿದ್ದರು...ಅಮ್ಮ ಹಿಂದೆಯೇ ಬರುತ್ತಿದ್ದರು...ಏನಾಯ್ತು ವಿಚಾರಿಸಿದಾಗ.."ಬೆಳಿಗ್ಗೆ ಸ್ವಲ್ಪ ಆಹಾರ ತೆಗೆದುಕೊಂಡ ಮೇಲೆ ಬಾಯಿಂದ ನೊರೆ ಬರಲಿಕ್ಕೆ ಪ್ರಾರಂಭ ಆಯ್ತು...ಕೂಡಲೆ ಸಿಸ್ಟರ್ಗೆ ವಿಷಯ ತಿಳಿಸಿದೆ..ಅವರು ರೂಮಿನಲ್ಲೇ ಪ್ರಥಮ ಚಿಕಿತ್ಸೆ ನೀಡಲು ಶುರುಮಾಡಿದರು..ನಂತರ ಇವರು ಅದಕ್ಕೆ ಸ್ಪಂದಿಸದೇ ಇದ್ದಾಗ ಈಗ ಐ.ಸಿ.ಯು ಗೆ ಕರೆದುಕೊಂಡು ಹೋದರು.." ಎಂದರು...ಇಷ್ಟೆಲ್ಲಾ ಆಗುವಾಗ ಆಸ್ಪತ್ರೆಯವರು ಅಪ್ಪನ ವೈದ್ಯರಿಗೆ ವಿಷಯ ತಿಳಿಸಿದ್ದಾರೆ..ಅವರು ಬರುವಷ್ಟರಲ್ಲಿ ಪುನಃ ಅಪ್ಪ ಐ.ಸಿ.ಯುನಲ್ಲಿ"ರಕ್ತ ವಾಂತಿ" ಮಾಡಿದ್ದಾರೆ...ಇದರಿಂದ ಶ್ವಾಸಕೋಶದ ರಕ್ತನಾಳಗಳು ಒಡೆದು ಹೋಗಿ ಅವರ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಿತ್ತು...ವೈದ್ಯರು ಬಂದವರೇ ಅಪ್ಪನನ್ನು ಪರೀಕ್ಷೆ ಮಾಡಿ ..ನಮ್ಮ ಹತ್ತಿರ... "ತುಂಬಾ ರಕ್ತ ಹೋಗಿದೆ...ಎರಡು ಬಾಟಲಿ ರಕ್ತ ಕೊಟ್ಟು ನೋಡೋಣ...ಪ್ಲಾಟೆಲೆಟ್ ಗಣಿಕೆ  ತುಂಬಾ ಕಡಿಮೆ ಆಗ್ತಾ ಇದೆ..ಹೀಗೆ ಮುಂದುವರಿದರೆ..ತುಂಬಾ ಕಷ್ಟ ...ನಾನು ನನ್ನ ಪ್ರಯತ್ನ ಮಾಡುತ್ತೇನೆ..ನೋಡೋಣ ಏನಾಗುತ್ತದೆ ಎಂದು"...ಹೇಳಿದಾಗ ಇನ್ನೂ ಗಾಬರಿ ನಮ್ಮ ಸ್ಥಿತಿ...ಸರಿ ಅವರ "ಎಪಾಸಿಟಿವ್"ರಕ್ತ ತರಲು ನನ್ನ ಯಜಮಾನರು ಮಣಿಪಾಲಕ್ಕೆ ಹೊರಟರು..ಅಲ್ಲಿ ಹೋದರೆ ಬ್ಲಡ್ ಬ್ಯಾಂಕ್ನವರಿಗೆ ಯಾರದ್ದಾದರು ಬೇರೆ ಎರಡು ಬಾಟಲಿ ರಕ್ತ ಕೂಡಲೇ ನೀಡಬೇಕಂತೆ..ಸರಿ ತನ್ನ ಸ್ನೇಹಿತರಿಗೆ ಫೋನ್ ಮಾಡಿ, ಅವರು ತಮ್ಮ ಆಫೀಸ್ ಕೆಲಸ ಬಿಟ್ಟು ರಕ್ತ ಕೊಟ್ಟಾದ ಮೇಲೆ...ಇವರು ರಕ್ತದ ಪ್ಯಾಕೆಟ್ ತರುವಾಗ ಸುಮಾರು ಹನ್ನೊಂದು ಘಂಟೆಯ ಸಮಯ...ಸರಿ ಅದನ್ನು ಕೂಡಲೇ ಅಪ್ಪನಿಗೆ ಕೊಡಲಾಯಿತು...ಇನ್ನೆರಡು ಘಂಟೆ ಅದು ಹೇಗೆ ಕಳೆದೆವೋ ದೇವರಿಗೆ ಗೊತ್ತು..ಆಗಲೇ ಮಧ್ಯಾಹ್ನ ಊಟದ ಸಮಯ...ಅಲ್ಲೇ ಕ್ಯಾಂಟಿನಿಂದ ಬಂದ ಊಟ ನಾನು, ಅಮ್ಮ ಜೊತೆಯಲ್ಲಿ ಮಾಡಿದೆವು...ಸಂಜೆ ಆಯ್ತು...ವೈದ್ಯರು ಪುನಃ  ರೌಂಡ್ಸ್ಗೆ ಬಂದರು..."ಏನೂ ಚೇತರಿಕೆಯಿಲ್ಲ..ಅವರ ಸ್ಥಿತಿ ಬೆಳಿಗ್ಗೆಯ ರೀತಿಯೇ ಮುಂದುವರಿಯುತ್ತಿದೆ".. ಎಂದಾಗ ನಮ್ಮಲ್ಲಿ ಪುನಃ ಆತಂಕ..ರಾತ್ರಿಯಾಯಿತು..ಅಮ್ಮ ಒಬ್ಬರೇ ಮಲಗಬೇಕೆಂದು ನಾನು ಅವರ ಜೊತೆ ರಾತ್ರಿ ಅಲ್ಲೇ ಕಳೆದೆ...ನೆಮ್ಮದಿ ಇಲ್ಲದ ರಾತ್ರಿಯದು...

ಅವತ್ತು ಮೇ ೪ನೇ ತಾರೀಕು...ಅಂತೂ ಇಂತೂ ಬೆಳಕಾಯ್ತು..ಬೆಳಿಗ್ಗೆ ೬ರ ಸಮಯ..ಬೇಗ ಮುಖ ತೊಳೆದು ಐ.ಸಿ.ಯು ಹತ್ತಿರ ಇಬ್ಬರೂ ಓಡಿದೆವು...ನಿಧಾನಕ್ಕೆ ಒಳಗೆ ಹೋದರೆ ತಣ್ಣಗಿನ ಎ.ಸಿಯ ತಂಪು...ತಂಪು.. ಕೀ.ಗುಟ್ಟುವ ಏನೇನೋ ಮೆಶಿನುಗಳು...ಎಲ್ಲಾ ಹಾಸಿಗೆಗಳಲ್ಲೂ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು...ಒಬ್ಬೊಬ್ಬರದು ಒಂದೊಂದು ಅವಸ್ಥೆ...ಅಪ್ಪನ ಮಂಚದ ಹತ್ತಿರ ನಿಧಾನಕ್ಕೆ ಹೋದರೆ ನಿಮಿಷಕ್ಕೊಮ್ಮೆ ಈ ಲೋಕದ ಪರಿವೆಯೇ ಇಲ್ಲದೇ ಕೇವಲ ಧೀರ್ಘವಾಗಿ ಉಸಿರು ತೆಗೆಯುತ್ತಿದ್ದಾರೆ...ಏನೇನೋ ಔಷಧಿಗಳು ಸೂಜಿಯ ಮೂಲಕ ಅಪ್ಪನ  ದೇಹ ಸೇರುತ್ತಿದೆ..ಎಲ್ಲಿಯೋ ಒದ್ದಾಡುತ್ತಿರುವ ಕಣ್ಣಿಗೆ  ಕಾಣದ ಸಣ್ಣದೊಂದು ಜೀವ...ಇನ್ನೂ ದೇಹದಲ್ಲಿತ್ತು..ಇದನ್ನೆಲ್ಲಾ ಕಣ್ಣು ತುಂಬಿಕೊಂಡು ಹೊರಗೆ ಬಂದೆವು...ಅಷ್ಟರಲ್ಲಿ ನನ್ನ ಯಜಮಾನರು ಬಂದರು...ಅವರು ಮಾವನನ್ನು ಒಳಗೆ ಹೋಗಿ ನೋಡಿ ಬಂದರು..ಅಪ್ಪನ ದೇಹಸ್ಥಿತಿಯ ಬಗ್ಗೆ ಮಾತನಾಡಲು ಮೂವರ ಬಳಿಯು ಮಾತಿರಲಿಲ್ಲ..ಕಣ್ಣಾರೆ ಕಂಡ ಮೇಲೆ ಮಾತಾನಾಡಲು ಶಬ್ದಗಳೇ ಇರಲಿಲ್ಲ..

ಇದರ ಮಧ್ಯೆ ನನ್ನ ಇನ್ನೊಂದು ಸಮಸ್ಯೆ ..ಒಂದು ತಿಂಗಳ ಹಿಂದೆಯೇ ಮಗನ ಪರೀಕ್ಷೆಯ ನಂತರ ಮೇ ತಿಂಗಳ ರಜದಲ್ಲಿ ಪಾಸ್ಪೊರ್ಟ್ಗಾಗಿ ಅದೇ ಮೇ 4ರಂದು ದಿನ ಆಯ್ಕೆ ಮಾಡಿಕೊಂಡಿದ್ದೆವು...ಅದಕ್ಕಾಗಿ ಮಂಗಳೂರಿನ ಪಾಸ್ಪೋರ್ಟ್ ಕಛೇರಿಗೆ ಅವತ್ತು ಹೋಗಬೇಕಿತ್ತು..ಇಲ್ಲಿಯ ಪರಿಸ್ಥಿತಿ ನೋಡಿದರೆ ಹೇಗೆ ಹೋಗೋದು ಎನ್ನುವ ಗೊಂದಲ...ಕೊನೆಗೆ ಅಮ್ಮನೇ.."ಹೋಗಿಬನ್ನಿ...ದೇವರಿದ್ದಾನೆ..."ಎಂದು  ಕಳಿಸಿಕೊಟ್ಟರು...ನಮಗೆ ೧೧.೩೦ ಘಂಟೆಗೆ ಸಮಯ ನಿಗದಿ ಮಾಡಿದ್ದರು...ಆಸ್ಪತ್ರೆಯಿಂದ ಸೀದಾ ಮನೆಗೆ ಬಂದು ಇದ್ದ ಬದ್ದ ಸಣ್ಣ ಕೆಲಸ ಮುಗಿಸಿ ೯ ಘಂಟೆ ಬಸ್ಸಿಗೆ ಮಂಗಳೂರಿಗೆ ಹೊರಟೆವು..ಅಲ್ಲಿ ತಲುಪುವಾಗ ೧೦.೩೦...ಇನ್ನು ಅಲ್ಲಿ ಎಷ್ಟು ಹೊತ್ತಾಗುತ್ತದೋ ಎಂದು ಎದುರಿಗೆ ಸಿಕ್ಕ ಹೋಟೆಲೊಂದರಲ್ಲಿ ಕಾಫಿ ಕುಡಿದು ಪಾಸ್ಪೋರ್ಟ್ ಕಛೇರಿಗೆ ಹೊರಟೆವು...ಅಲ್ಲಂತೂ ಹೊರಗಿನಿಂದಲೇ ಸರತಿ ಸಾಲು ಹನುಮಂತನ ಬಾಲದಂತೆ ಉದ್ದವಾಗಿತ್ತು...ಅದನ್ನು ನೋಡಿಯೇ ನನಗೆ ತಲೆ ನೋಯಲಿಕ್ಕೆ ಶುರು ಆಯ್ತು...ಇಲ್ಲಿ ಇನ್ನು ಎಷ್ಟು ಕಾಯಬೇಕೋ ಎಂದು....ಸರಿ ನಮ್ಮ ನಿಗದಿತ ಸಮಯ ಹತ್ತಿರ ಬಂದಂತೆ ತಪಾಸಣೆಯ ನಂತರ ಒಳಬಿಡಲಾಯಿತು..ಅಲ್ಲಿಂದ ಮುಂದೆ ದಾಖಲೆಗಳ ವಿಚಾರಣೆ..ಅಲ್ಲೂ ಸಹಾ ನನ್ನ ಎರಡೆರಡು ಹೆಸರಿನಿಂದ ಗೊಂದಲ...ಹೇಗೋ ಅದೂ ಪರಿಹಾರವಾಗಿ...ನಂತರ ಪುನಃ ಕಾಯುವಿಕೆ..ಆಗಲೇ ಯಜಮಾನರ ಫೋನ್ ರಿಂಗಾಯಿತು..ಅವರು ಮಾತಾಡಿ ನನ್ನ ಹತ್ತಿರ ವಿಷಯ ತಿಳಿಸುವಾಗ ಅವರ ಮುಖ ಕಪ್ಪು ಕಪ್ಪು..."ನಿನ್ನ ತಂದೆ ತೀರಿ ಹೋದ್ರಂತೆ ..ಕಣೆ..ಅತ್ತೆಯ ಫೋನ್..." ಇದನ್ನು ಕೇಳಿಯೇ ನಾನು ಭಾಗಷಃ ಕುಸಿದು ಹೋಗಿದ್ದೆ...ನನ್ನ ಮನಸ್ಸಿಗೆ ಆಗ ಕೂಡಲೇ ಬಂದ ವಿಚಾರ..."ಅಮ್ಮನ ಪರಿಸ್ಥಿತಿ ಹೇಗಿರಬಹುದು...ಅವರ ಹತ್ತಿರ ಅಲ್ಲಿ ಯಾರೂ ಇಲ್ಲ...ತನ್ನ ೪೪ ವರ್ಷ ಜೊತೆಯಾದ ಸಂಗಾತಿ...ಇನ್ನಿಲ್ಲ...ಎಂದು ಹೇಳುವಾಗ ಅವರು ಎಷ್ಟು ನೊಂದಿರಬಹುದು...?

ಕೊನೆಗೆ ನನಗೆ ನಾನೇ ಸಮಾಧಾನ ಮಾಡಿಕೊಂಡು ಇನ್ನು ಮುಂದೆ ಏನು ಮಾಡುವುದು..ಇಬ್ಬರೂ ಚರ್ಚೆ ಮಾಡಿ..ಮೊದಲು ನನ್ನ ಚಿಕ್ಕಪ್ಪ ಶ್ರೀಕಾಂತ್ ಶೆಣೈಯವರಿಗೆ ಫೋನ್ ಮಾಡಿದರೆ..ಅವರ ಫೋನ್ ಸ್ವಿಚಾಫ್ ಎಂದು ಬರುತ್ತಿತ್ತು..ಸರಿ ಈಗೇನು ಮಾಡೋದು ಎಂದು ಚಿಕ್ಕಮ್ಮ ಮಾಲತಿ ಶೆಣೈಯವರಿಗೆ ಫೋನ್ ಮಾಡಿದ್ರೆ..ದೇವರ ದಯ ಅವರ ಜೊತೆ ಸಂಪರ್ಕ ಸಾಧ್ಯ ಆಯ್ತು..ಅವರಿಗೆ ವಿಷಯ ತಿಳಿಸಿದೆ..ಅವರು "ಶ್ರೀಕಾಂತ್ಗೆ ನಾನು ಹೇಳ್ತೀನಿ" ಅಂತ ಹೇಳಿದರು. ಸರಿ ಇನ್ನೊಬ್ಬ ಚಿಕ್ಕಪ್ಪನಿಗೆ ಫೋನ್ ಮಾಡಿ ವಿಷಯ ತಿಳಿಸಿದೆ...ಸ್ವಲ್ಪ ಹೊತ್ತಿನಲ್ಲಿ ಶ್ರೀಕಾಂತ್ ಚಿಕ್ಕಪ್ಪನ ಫೋನ್ ನನಗೆ ಬಂತು.."ನಾವು ಕೂಡಲೇ ಬೆಂಗಳೂರಿನಿಂದ ಹೊರಡ್ತಾ ಇದ್ದೇವೆ..ಚಿಂತೆ ಮಾಡ್ಬೇಡ..." ಅಂತ..ಪಾಪ ಅವರು ಯಾವುದೋ ಮೀಟಿಂಗ್ನಲ್ಲಿ ಇದ್ದರಂತೆ..ಚಿಕ್ಕಮ್ಮ ಬೇರೆಯವರಿಗೆ ವಿಷಯ ತಿಳಿಸಿ, ನಂತರ ಅವರು ಚಿಕ್ಕಪ್ಪನಿಗೆ ಸುದ್ದಿ ಮುಟ್ಟಿಸಿದ್ದರಂತೆ...ಇನ್ನು ಮುಂದೆ..ಅಮ್ಮ ಆಸ್ಪತ್ರೆಯಲ್ಲಿ ಒಬ್ಬರೇ ಇದ್ದಾರೆ..ಅವರ ಹತ್ತಿರ ಯಾರಾದ್ರೂ ಇರಬೇಕಲ್ವಾ.. ಇದು ನೆನಪಾದಾಗ..ಉಡುಪಿಯಲ್ಲಿ ನನ್ನ ತಂದೆಯ ತಂಗಿ ಮನೆ ಇದೆ..ಅವರ ಗಂಡ ನನ್ನ ರಮೇಶ್ ಮಾವನಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ..ಪಾಪ ಅವರು ತಮ್ಮ ಬ್ಯಾಂಕ್ ಕೆಲಸ ಬಿಟ್ಟು..."ನಾನು ಅತ್ತಿಗೆಯ ಜೊತೆ ಇರ್ತೇನೆ..ಶ್ರ್‍ಈಕಾಂತ್ ಬರುವುದು ಹೇಗೂ ತಡ ಉಂಟಲ್ವಾ...ನೀನು ಚಿಂತೆ ಮಾಡ್ಬೇಡಾ..ಮಂಗಳೂರಿನ ಕೆಲಸ ಮುಗಿಸಿಯೇ ಬಾ..ಗಡಿಬಿಡಿ ಮಾಡ್ಬೇಡ"..ಅಂತ ಧೈರ್ಯ ಹೇಳಿದರು...ಇಷ್ಟೆಲ್ಲಾ ಫೋನಲ್ಲಿ ಮಾತುಕಥೆ ಯಾರಿಗೂ ಅಕ್ಕಪಕ್ಕ ಕೂತವರಿಗೆ  ಕೇಳದಂತೆ ಮಾಡಿದ್ದೆ...ಯಾಕೆಂದರೆ ಆ ಆಫೀಸ್ನಲ್ಲಿ..ಮೊಬೈಲ್ ಸ್ವಿಚ್ ಆಫ್ ಮಾಡಿ ಅಂತ ಗಳಿಗೆಗೊಮ್ಮೆ ಹೇಳುತ್ತಿದರು...ನನ್ನ ಗಂಡ ಸಹಾ ತನ್ನ ಅಮ್ಮನಿಗೆ ಕರೆ ಮಾಡಿ ಸ್ವಲ್ಪ ಆಸ್ಪತ್ರೆಗೆ ಹೋಗಿ ಅತ್ತೆಯ ಜೊತೆ ಇರಲಿಕ್ಕೆ ಹೇಳಿದರು...ಇಷ್ಟೆಲ್ಲಾ ಗೊಂದಲದಿಂದ ಈ ಪಾಸ್ಪೋರ್ಟ್ ಬೇಡ...ಏನೂ ಬೇಡ...ಓಡಿ ಹೋಗೋಣ ಅನ್ನಿಸ್ತಾ ಇತ್ತು...ಇದರ ಮಧ್ಯೆ ವಿಷಯ ತಿಳಿದು ಸಂಬಂಧಿಕರು ನನಗೆ ಗಳಿಗೆಗೊಮ್ಮೆ ಫೋನ್ ಮಾಡ್ಲಿಕ್ಕೆ ಪ್ರಾರಂಭ ಮಾಡಿದ್ದರು..ಅವರಿಗೆಲ್ಲಾ ಉತ್ತರಿಸಿ ನಾನಂತೂ ಅರೆಜೀವವಾಗಿದ್ದೆ..ಅಂತೂ ಪಾಸ್ಪೋರ್ಟ್ನ ಎಲ್ಲಾ ಕೆಲಸ ಮುಗಿಸಿ ಹೊರಗೆ ಬರುವಾಗ ೨ ಘಂಟೆಯಾಗುತ್ತಾ ಬಂದಿತ್ತು..


ಇನ್ನು ಉಡುಪಿಗೆ ಒಂದೂವರೆ ಘಂಟೆಗಳ ಪ್ರಯಾಣ... ಹತ್ತಿರವೇ ಇದ್ದ ಬಸ್ ನಿಲ್ದಾಣಕ್ಕೆ ಬಂದಾಗ ವೋಲ್ವೋ ಬಸ್ ಸಿಕ್ಕಿತು...ನನಗೆ ಆ ತಂಪಾದ ಗಾಳಿಯಲ್ಲೂ...ಹೇಳಿಕೊಳ್ಳಲಾಗದ ಅದೇನೋ ಸಂಕಟ...ಏನೇನೋ ಹಳೆಯ ನೆನಪುಗಳು....ಅಪ್ಪನ ಪ್ರೀತಿ, ವಾತ್ಸಲ್ಯ ಎಲ್ಲಾ ಕಣ್ಣ ಮುಂದೆ ಬರುತ್ತಿತ್ತು....ನನಗೆ ಗೊತ್ತಿಲ್ಲದೆ ಕಣ್ಣೀರು ಹರಿಯುತ್ತಿತ್ತು...ಅಷ್ಟು ಸಮಯದಿಂದ ಒತ್ತಿಟ್ಟ ದುಃಖ ಕರಗುತ್ತಿತ್ತು...ಅಂತೂ ಮನೆ ತಲುಪುವಾಗ ೩.೩೦...ಅವಸರದಲ್ಲಿ ಒಂದಿಷ್ಟು ಹಣ ತೆಗೆದುಕೊಂಡು ಸಿಟಿ ಆಸ್ಪತ್ರೆಗೆ ಓಡಿದೆವು...ಈಗ ಅಲ್ಲಿಯ ಲಿಫ್ಟ್ ನಮಗೋಸ್ಕರವೇ ಕಾದಂತೆ ಮೂರನೆಯ ಮಹಡಿ ತಲುಪಿಸಿತು...ಅಮ್ಮನ ಮುಖ ನೋಡಲಿಕ್ಕೂ ನನಗೆ ಏನೋ ಸಂಕಟ...ಆಗಲೇ ತುಂಬಾ ಜನ ಸಂಬಂಧಿಕರು ಅಪ್ಪನ ವಾರ್ಡ್ನಲ್ಲಿ ಇದ್ದರು...ಅಪ್ಪನ ನಿರ್ಜೀವ ದೇಹ...ಐ.ಸಿ.ಯು ಪಕ್ಕದ ರೂಮಿನಲ್ಲಿ ಇಟ್ಟಿದ್ದೇವೆ ಎಂದರು...ಸರಿ ಆ ಕೊಠಡಿಯ ಬಾಗಿಲು ಮುಚ್ಚಿತ್ತು..ನಿಧಾನ ತೆರೆದು ಒಳ ಹೋದರೆ..ಅಪ್ಪನನ್ನು ಬಿಳಿಯ ಬಟ್ಟೆಯಲ್ಲಿ ಸುತ್ತಿ ಇಡಲಾಗಿತ್ತು..ಬೆಳಿಗ್ಗೆ ಇದ್ದ "ಗುಟುಕು ಜೀವ" ಯಾವಾಗಲೋ ಹಾರಿ ಹೋಗಿತ್ತು..ಇಷ್ಟೆಲ್ಲಾ ಆದ್ರೆ ಆಯ್ತಾ...ಮುಂದಿನ ವ್ಯವಸ್ಥೆ ಏನು ಎಂಬ ಚರ್ಚೆ ಪ್ರಾರಂಭ ಆಯ್ತು..ಶ್ರೀಕಾಂತ್ ಚಿಕ್ಕಪ್ಪ ಬರಲಿಕ್ಕೆ ರಾತ್ರಿಯಾಗುತ್ತೆ...ಅಲ್ಲಿಯ ತನಕ ದೇಹವನ್ನು ಹಾಗೆ ಇಡಲಿಕ್ಕೆ ಸಾಧ್ಯ ಇಲ್ಲ...ಉಡುಪಿಯ ದಹನಕ್ಕೆ ಸಹಾಯ ಮಾಡುವ ಕಾರ್ಯಕರ್ತರು ರಾತ್ರಿ ಬೇಡ...ಮರುದಿನವೇ ಮುಂದೂಡೋಣ ಎಂಬ ಸಲಹೆ ಇತ್ತರು...ಸರಿ..ಅಲ್ಲಿಯ ತನಕ ದೇಹವನ್ನು ಗಾಳಿಗೆ ಇಟ್ಟರೆ ಊದಿಕೊಳ್ಳುವುದರಿಂದ ಶವಾಗಾರದಲ್ಲಿ ಇಡೋಣ ಎಂದು ನಿರ್ಧಾರ ತೆಗೆದುಕೊಂಡೆವು..ಆದರೆ ಆ ಆಸ್ಪತ್ರೆಯಲ್ಲಿ ಶವಾಗಾರದ ವ್ಯವಸ್ಥೆ ಇಲ್ಲದೇ ಇರುವುದರಿಂದ..ಪುನಃ "ಮಣಿಪಾಲಕ್ಕೆ" ಸ್ಥಳಾಂತರಿಸಬೇಕಿತ್ತು..ಆಗಲೇ ಸಮಯ ೫.೩೦ ಆಗುತ್ತಾ ಬಂದಿತ್ತು..ಅಲ್ಲಿಯ ಶವಾಗಾರ ಸಂಜೆ ೬ ಘಂಟೆಗೆ ಮುಚ್ಚಿಬಿಡುತ್ತಾರಂತೆ..ಸರಿ..ಆಸ್ಪತ್ರೆ ಡಿಸ್ಚಾರ್ಜ್ನ ಬಿಲ್ಲು ಕಟ್ಟಿ ಆಂಬುಲೆನ್ಸ್ನಲ್ಲಿ ಅಪ್ಪನ ದೇಹವನ್ನು ಮಣಿಪಾಲಕ್ಕೆ ಸ್ಥಳಾಂತರ ಮಾಡಿದೆವು...ನಾನು,ಅಮ್ಮ ಮಾವನ ಕಾರಿನಲ್ಲಿ ಆಸ್ಪತ್ರೆಗೆ ಕೊಂಡೊಯ್ದ ಎಲ್ಲಾ ಸಾಮಾನುಗಳನ್ನು ತುಂಬಿಸಿಕೊಂಡು ಕಡಿಯಾಳಿಯ ಮನೆಗೆ ಹೊರಟೆವು..ಆದರೆ ನಾವು ಹೋಗುವಾಗ ಇದ್ದ ಜೀವ ಮಾತ್ರ ಪುನಃ ಕರೆತರಲಾಗದೆ ಬರಿಗೈಯ್ಯಲ್ಲಿ ಮನೆಗೆ ಮರಳಿದ್ದೆವು... :(

ಇಷ್ಟೆಲ್ಲಾ ಆಗುವಾಗ ತೀರ್ಥಹಳ್ಳಿಯಿಂದ ಅವರ ಆತ್ಮೀಯರು,ಅಂಗಡಿಯ ಅಕ್ಕಪಕ್ಕದವರು,ಸಂಬಂಧಿಕರು ಅವರನ್ನು ಅಂತಿಮವಾಗಿ ನೋಡಲೆಂದು ಕಾರು,ವ್ಯಾನ್ ಮಾಡಿ ಬಂದರು. ಅವರಿಗೆಲ್ಲಾ....ದಹನ ಕಾರ್ಯ ಮಾರನೇ ದಿನ ಇದ್ದದ್ದರಿಂದ ಅವರನ್ನು ನೋಡಲಾರದೇ ಅಮ್ಮನ ಹತ್ತಿರ ಮಾತನಾಡಿಸಿ ತಮ್ಮ ಊರಿಗೆ ಮರಳಿದರು. ರಾತ್ರಿ ೯ ಘಂಟೆಯ ತನಕ ನಮಗೆ ಇದೇ ಕೆಲಸ..ಅಮ್ಮ ಬೆಳಿಗ್ಗೆಯಿಂದ ಏನೂ ತಿಂದಿರಲಿಲ್ಲ...ಸ್ವಲ್ಪ ಅನ್ನ ಮಾಡಿ ಬಲವಂತದಿಂದ ಊಟದ ಶಾಸ್ತ್ರ ಮಾಡಿದೆವು...ಸುಮಾರು ೧೧.೩೦ರ ಸಮಯಕ್ಕೆ ಚಿಕ್ಕಪ್ಪ, ಚಿಕ್ಕಮ್ಮ, ಮಕ್ಕಳು ಪರಿವಾರ ಸಮೇತ ಬೆಂಗಳೂರಿನಿಂದ ಬಂದಿಳಿಯುತ್ತಾರೆ..ಸ್ವಲ್ಪ ಅರ್ಧ ಘಂಟೆ ಮಾತಾಡಿ ಎಲ್ಲರೂ ನಿದ್ದೆಯ ಶಾಸ್ತ್ರ ಮಾಡಿದೆವು.

ಮಾರನೇ ದಿನ ಮೇ ೫ ನೇ ತಾರೀಕು...ಬೆಳಕಾಯ್ತು..೮ ಘಂಟೆ ಸುಮಾರಿಗೆ ಎಲ್ಲರೂ ಮಣಿಪಾಲದ ಶವಾಗಾರಕ್ಕೆ ಹೋಗಿ ಅಪ್ಪನ ದೇಹವನ್ನು ಮನೆಗೆ ತರುತ್ತಾರೆ. ಏನೆಲ್ಲಾ ವಿಧಿ-ವಿಧಾನ ಮಾಡಬೇಕಿತ್ತೋ ಅದನ್ನೆಲ್ಲಾ ಮಗನ ಸ್ಥಾನದಲ್ಲಿ ನಿಂತು ಶ್ರೀಕಾಂತ ಚಿಕ್ಕಪ್ಪ ನೆರವೇರಿಸುತ್ತಾರೆ.. ತುಳಸಿಕಟ್ಟೆಯ ಹತ್ತಿರ ಅವರ ದೇಹಕ್ಕೆ ನೀರು ಹೊಯ್ದು  ಮನೆಯವರೆಲ್ಲಾ ಎಳ್ಳು-ನೀರು ಬಿಟ್ಟು ಕಡೆಯ ಸಲ ನಮ್ಮ ನಮನ ಸಲ್ಲಿಸಿದ್ದೆವು..ತೀರ್ಥಹಳ್ಳಿಯಿಂದ ಪುನಃ ಅವರ ಅಭಿಮಾನಿಗಳು...(ಅವರು ಅಲ್ಲಿಯ ವೆಂಕಟರಮಣ ದೇವಸ್ಥಾನದ ಮಾಜಿ ಅಧ್ಯಕ್ಷರಾಗಿದ್ದರಿಂದ ಅಲ್ಲಿಯ ಕಮಿಟಿ ಸದಸ್ಯರು ಬಂದಿದ್ದರು) ಸಂಬಂಧಿಕರು ಬಂದಿದ್ದರು.. ಪುನಃ ಅವರನ್ನು ಅಂಬುಲೆನ್ಸ್ನಲ್ಲಿ ಉಡುಪಿಯ ಬೀಡಿನಗುಡ್ಡೆಯ ಸ್ಮಶಾನಕ್ಕೆ ಕೊಂಡೊಯ್ದು  ಅಲ್ಲಿ ದಹನ ಕಾರ್ಯ ನಡೆಸಲಾಯಿತು....

ಇಷ್ಟಕ್ಕೆಲ್ಲಾ ಕಾರಣವಾದ ವಿಷಯವೆಂದರೆ...ಅವರು ಕೆಲವು ವರ್ಷಗಳಿಂದ ಸೇವಿಸುತ್ತಿದ್ದ ಒಂದು ರಕ್ತದೊತ್ತಡದ ಮಾತ್ರೆ...ಅದರ ಅಡ್ದ ಪರಿಣಾಮದಿಂದ..ಯಾವುದೇ ಧೂಮಪಾನ, ಮಧ್ಯಪಾನದ ಚಟ ಇಲ್ಲದ ಮನುಷ್ಯನ ಯಕ್ರುತ್ತು(ಲಿವರ್), ಕುಡುಕರ ಲಿವರ್ನಂತೆ ಕಾರ್ಯನಿರ್ವಹಿಸುತ್ತಿರಲಿಲ್ಲ...ಇಡೀ ಮೈಯೆಲ್ಲಾ ನೀರು ತುಂಬಿಕೊಂಡು..ಕಲ್ಮಶಗಳು ಹೊರಗೆ ಹೋಗದೇ ಅವರು ಬೆಲೂನಿನಂತೆ ಉಬ್ಬುತ್ತಿದ್ದರು..  ಮಾತ್ರೆಗೆ ಕಡಿಮೆಯಾಗದ ಇದು ಇಂಜಕ್ಶನ್ ಮೂಲಕ ಅವರ ತೂಕವನ್ನು ಕಡಿಮೆ ಮಾಡಿಸಲು ಆಗಾಗ್ಗೆ ಮಣಿಪಾಲದ ಆಸ್ಪತ್ರೆಗೆ ಸೇರಿಸಬೇಕಿತ್ತು...


ವಿಪರ್ಯಾಸವೆಂದರೆ...ಕಳೆದ ವರ್ಷ ಮೇ..೫ನೇ ತಾರೀಖಿನಂದು ನನ್ನ ಮಗನ ಉಪನಯನ(ಬ್ರಹ್ಮೋಪದೇಶ). ಅವತ್ತು ನಗುತ್ತಾ, ಎಲ್ಲರೊಡನೆ ಮಾತನಾಡುತ್ತಾ..ಮೊಮ್ಮಗನ ಉಪನಯನದ ಸಂತೋಷ ಅನುಭವಿಸಿದ ಅಜ್ಜ...ಈ ವರ್ಷ ಅದೇ ಮೇ ೫ರಂದು...ಯಾರೊಡನೆ ಮಾತನಾಡದೇ ಸ್ಮಶಾನದ ಚಿತೆಯಲ್ಲಿ ಬೂದಿಯಾಗಿದ್ದರು.. 







ಈ ಚಿತ್ರದಲ್ಲಿ ಎಡದಿಂದ ಮೊದಲನೆಯವರು ನನ್ನ ಮಾಲತಿ ಚಿಕ್ಕಮ್ಮ, ಅವರ ಪಕ್ಕ ಎರಡೆನೆಯವರು ನನ್ನ ತಂದೆ ಟಿ.ವಿ.ಅನಂತ ಶೆಣೈ(ಬಿಳಿ ಮುಂಡು, ಶರ್ಟ್ ಧರಿಸಿದವರು), ಮೂರನೆಯವರು ನನ್ನ ಶ್ರೀಕಾಂತ್ ಚಿಕ್ಕಪ್ಪ, ನಾಲ್ಕನೆಯವರು ನನ್ನ ಇನ್ನೊಬ್ಬ ನಾಗರಾಜ್ ಚಿಕ್ಕಪ್ಪ...ಈ ಚಿತ್ರ ನನ್ನ ಮಗನ ಉಪನಯನದ ದಿನ ತೆಗೆದದ್ದು....ಈಗ ಉಳಿದಿರುವುದು ಕೇವಲ ಈ ಚಿತ್ರಗಳು ಮತ್ತು ನೆನಪುಗಳು ಮಾತ್ರ....