ಸ್ನೇಹಿತರೆ ಇದನ್ನು ಲಘು ಹಾಸ್ಯಬರಹ ಎಂದು ಓದಿ.. ಇದೇನಪ್ಪ ದೇವಿ ಮಹಾತ್ಮೆ ಇದ್ದಂಗೆ ಸಂಖ್ಯಾ ಮಹಾತ್ಮೆ ಅಂದುಕೊಂಡ್ರಾ... ಅದರ ಕಥೆ ಹೇಳ್ತೀನಿ ಕೇಳಿ...ಮನುಷ್ಯನಿಗೆ ಜೀವನದಲ್ಲಿ ಏನೇನೋ ಹುಚ್ಚು ಇರುತ್ತೆ.. ಕೆಲವು ಅಪಾಯಕಾರಿ ಆದರೆ ಇನ್ನು ಕೆಲವು, ಯಾರಿಗೂ ತೊಂದರೆ ಆಗದೆ ಇರುವಂಥದ್ದು..ಕೆಲವರ ಹುಚ್ಚು ಕೆಲಸಗಳು, ಬೇರೆಯವರ ಕಣ್ಣಿಗೆ ಕಾಣ್ಸತ್ತೆ...ಇನ್ನು ಕೆಲವರ ಹುಚ್ಚು ಅವರ ಮನಸ್ಸಲ್ಲೇ ಇದ್ದು, ಅವರು ಮಾತ್ರ ಅದನ್ನ ಅನುಭವಿಸ್ತಾ ಇರ್ತಾರೆ..
ನನ್ನ ಬಗ್ಗೆ ಹೇಳ್ಬೇಕಂದ್ರೆ, ನನಗೂ ಒಂದು ರೀತಿ ಈ ಹುಚ್ಚು(ಕ್ರೇಜ್) ಇದೆ ಅನ್ನಬಹುದು. ಇದು ಸಹಾ ಒಂದು ರೀತಿ ಮನಸ್ಸಿನ್ನಲ್ಲೇ ಯಾವಾಗಲೂ ಮೂಡೋ ಒಂದು ತರಹದ ನಂಬಿಕೆ,ವಿಶ್ವಾಸ,ಕಲ್ಪನೆ. ಈ ಬಗ್ಗೆ ಯೋಚನೆ ಮಾಡಿದಾಗೆಲ್ಲ ನನ್ನಷ್ಟಕ್ಕೆ ನಾನೇ ನಗ್ತೀನಿ... ಇದರಿಂದ ಲಾಭ ಅಥವಾ ನಷ್ಟ ಇಲ್ಲ ಅಂತ ಗೊತ್ತಿದ್ದರೂ ನಿತ್ಯದ ಜೀವನದಲ್ಲಿ ಮುಂದುವರಿತಾ ಹೋಗ್ತಾನೆ ಇದೆ.... :-)
ನನಗೆ "ಸಂಖ್ಯೆ ಒಂದು" ಅಂದ್ರೆ ಅದೊಂಥರಾ ಪ್ರೀತಿ...ಪ್ರತಿ ಬಾರಿಯೂ, ಎಲ್ಲೆಡೆಯೂ ಅದನ್ನು ಹುಡುಕ್ತಾ ಇರ್ತೇನೆ. ಅದೊಂಥರಾ "ಅದೃಷ್ಟ " ಅಥವಾ "ಲಕ್ಕಿ ನಂಬರ್" ಅಂತಾರಲ್ಲ ಆ ಭಾವನೆ....
ನಾನು ಹುಟ್ಟಿದ್ದು "ಒಂದನೇ ತಾರೀಕು", ಜೊತೆಗೆ ತಿಂಗಳು ಅಕ್ಟೋಬರ್ ಅಂದ್ರೆ ಹತ್ತನೇ ತಿಂಗಳು ..ಅದರಲ್ಲೂ "ಒಂದು" ಇದೆ..ಹೀಗಾಗಿ ಸಂಖ್ಯೆ ಒಂದು ನನ್ನನ್ನು ಜನ್ಮದಿಂದ ಹಿಂಬಾಲಿಸಿ ಬರ್ತಾ ಇದೆ ಅನ್ಸುತ್ತೆ...ಬಹುಷಃ ಇದು ನನ್ನ ಕೊನೆ ಉಸಿರು ಇರೋವರೆಗೋ ಹೀಗೆ ಮುಂದುವರಿತದೋ ಏನೋ ಎಂದು ಕೆಲವೊಮ್ಮೆ ಅನಿಸುವುದುಂಟು.....
ನನಗೆ ನೆನಪಿದ್ದ ಹಾಗೆ ಇದು ತುಂಬಾ ವರ್ಷ ಹಿಂದಿನ ನೆನಪು. ಹತ್ತನೇ ತರಗತಿ ಓದುತ್ತಿದ್ದಾಗ ಮಾರ್ಚ್-ಏಪ್ರಿಲ್ ಪರೀಕ್ಷೆಯಲ್ಲಿ, ಹಾಲ್ ಟಿಕೆಟ್ ನಂಬರ್ ಸುಮಾರು ಆರು ಅಥವಾ ಏಳು ಸಂಖ್ಯೆಯದಿತ್ತು . ಆ ಪರೀಕ್ಷೆ ಕೊಠಡಿಯಲ್ಲಿ ಕುಳಿತು ಎಲ್ಲಾ ಸಂಖ್ಯೆಯನ್ನು ಕೂಡಿಸಿ ಎಲ್ಲಾದರೂ ಒಂದು ಬರುತ್ತಾ ಎಂದು ಲೆಕ್ಕ ಮಾಡಿದ್ದು ಈಗಲೂ ನೆನಪಿದೆ. ಆ ಸಂಖ್ಯೆ ಒಂದು ಬಂದರೆ ಪಾಸಾಗ್ತಿನಿ ಅನ್ನೋ ಹುಚ್ಚು ಕಲ್ಪನೆ... :-)
ಈ ಚಾಳಿ ಈಗಲೂ ಮುಂದುವರಿತಾ ಇದೆ. ಇತ್ತೀಚಿನ ನೆನಪೆಂದರೆ, ನನಗೆ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳೆಂದರೆ ತುಂಬಾ ಪ್ರೀತಿ . ಪ್ರತಿ ವರ್ಷ ರಾಘವೇಂದ್ರ ಸ್ವಾಮಿಗಳ ಆರಾಧನೆಯ ನೇರಪ್ರಸಾರವನ್ನು 'ಈ ಟಿ ವಿಯಲ್ಲಿ " ಪ್ರಸಾರ ಮಾಡುತ್ತಾರೆ. ಕಳೆದ ವರ್ಷವೂ ಮಧ್ಯಾಹ್ನ ಹೀಗೆ ಟಿ ವಿ ನೋಡ್ತಾ ಇದ್ದೆ. ಮಂಗಳಾರತಿಯ ಸಮಯ. ಹಿನ್ನಲೆಯಲ್ಲಿ ಡಾ. ರಾಜಕುಮಾರ್ ಅವರ ಈ ಹಾಡು ಬರ್ತಾ ಇತ್ತು.
"ವಾರ ಬಂತಮ್ಮ ಗುರುವಾರ ಬಂತಮ್ಮ, ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ ,ಸ್ಮರಣೆ ಮಾತ್ರದಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ...
ಯೋಗಿ ಬರುವನಮ್ಮ, ಶುಭ ಯೋಗ ಬರುವುದಮ್ಮ , ರಾಘವೇಂದ್ರ ಗುರುರಾಯ ಬಂದು ಭವ ರೋಗ ಕಳೆವನಮ್ಮ ...
ಮನವ ತೊಳೆಯಿರಮ್ಮ , ಭಕ್ತಿಯ ಮಣೆಯ ಹಾಕಿರಮ್ಮ , ಧನ್ಯದಿಂದ ಕರೆದಾಗ ಬಂದು ಒಳಗಣ್ಣ ಬೆರೆವನಮ್ಮ ...
ಕೋಪ ಅರಿಯನಮ್ಮ ಯಾರನು ದೂರ ತಳ್ಳನಮ್ಮ , ಪ್ರೀತಿ ಮಾತಿಗೆ ಸೋತು ಬರುವ ಮಗುವಂತೆ ಕಾಣಿರಮ್ಮ ....
ಹಿಂದೆ ಬರುವನಮ್ಮ ರಾಯರ ನೆರಳಿನಂತೆ ಹನುಮ, ಹನುಮನಿದ್ದೆಡೆ ರಾಮನಿದ್ದು ನಿಜ ಮುಕ್ತಿ ಕೊಡುವನಮ್ಮ.........."
ಈ ಹಾಡು ಕೇಳ್ತಾ ಆರತಿ ನೋಡ್ತಾ, ಗೋಡೆ ಮೇಲಿದ್ದ ಗಡಿಯಾರ ನೋಡಿದ್ರೆ "ಸರಿಯಾಗಿ ಒಂದು ಘಂಟೆ ಸಮಯ"...ಅದೇಕೋ ಗುರುರಾಯರ ಆಶೀರ್ವಾದ ಆಯ್ತು ಅನ್ನೋ ಸಂತೋಷದ ಕಲ್ಪನೆ .... :-)
ಇನ್ನು ಗಮ್ಮತ್ತಿನ ವಿಷಯ ಅಂದ್ರೆ ಮನೆಗೆ ಕಂಪ್ಯೂಟರ್ ಬಂದ ಮೇಲೆ ಕುತೂ ಹಲದಿಂದ ಗೂಗಲ್ ನಲ್ಲಿ "ನ್ಯುಮರೋಲಾಜಿ" ಬಗ್ಗೆ ಓದಿದ್ದು ..ಸಂಖ್ಯೆ ೧ ಅಂದರೆ ಸೂರ್ಯ ಅದಕ್ಕೆ ಅಧಿಪತಿ, ಒಂದನೇ ತಾರೀಕಿನಲ್ಲಿ ಹುಟ್ಟಿದವರಿಗೆ ಯಾವುದು ಶುಭ,ಅಶುಭ ಇತ್ಯಾದಿ ಅನ್ನುವ ಎಲ್ಲಾ ವಿಷಯ ಓದಿದ್ದು ... ಈ ವಿಷಯ ನಗು ಬರುವಂಥಹದ್ದೆ ಆದ್ರೂ ಸತ್ಯ ಘಟನೆ... :-)
ಪ್ರಪಂಚದಲ್ಲಿ ಎಲ್ಲ ಮನಸ್ಥಿತಿಯ ಜನರು ಇರ್ತಾರೆ ..ಅದರಲ್ಲಿ ನಾನು ಒಬ್ಬಳು. ಸ್ನೇಹಿತರೆ ನನ್ನ ಹಾಗೆ ನಿಮಗೂ ಏನಾದರೂ ಈ ರೀತಿಯ ಅಭ್ಯಾಸಗಳು ಇದ್ದರೆ ಮುಕ್ತವಾಗಿ ಹಂಚಿಕೊಳ್ಳಿ ....
ಪ್ರೀತಿಯಿಂದ
ಸುದೀಪ....